“ತ್ರಿಶೂರ್: ಮತದಾರರಿಗೆ ಕಿಟ್ ಹಂಚಿಕೆ; ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು”

ತ್ರಿಶೂರ್: ಕೇರಳದಲ್ಲಿ ಎಪ್ರಿಲ್ 9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರಿಗೆ ಮನೆಬಳಕೆಯ ಸಾಮಾನುಗಳಿದ್ದ ಕಿಟ್ ಗಳನ್ನು ವಿತರಿಸಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ನಾಯಕರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿ ಕಿಟ್ ಮೌಲ್ಯ ಸುಮಾರು 900 ರೂ. ಆಗಿದ್ದು, ಮತದಾರರ ಮೇಲೆ ಪ್ರಭಾವ ಬೀರಲು ಅವುಗಳನ್ನು ಹಂಚಲಾಗಿದೆ ಎಂದು ಆರೋಪಿಸಲಾಗಿದೆ.
ಶನಿವಾರ ಓಲಾರಿಯ ಪಾರ್ಥಸಾರಥಿ ದೇವಸ್ಥಾನದ ಬಳಿ ಕಿಟ್ ಗಳನ್ನು ವಿತರಿಸುತ್ತಿದ್ದ ವೇಳೆ ತ್ರಿಶೂರ್ ನ ಫೈಯಿಂಗ್ ಸ್ಮಾಡ್ ತಂಡ ಮಧ್ಯಪ್ರವೇಶಿಸಿ ವಿತರಣೆಯನ್ನು ತಡೆಹಿಡಿಯಿತು. ಈಗಾಗಲೇ ಸುಮಾರು 100 ಕಿಟ್ ಗಳನ್ನು ವಿತರಿಸಲಾಗಿತ್ತು.

ಅಧಿಕಾರಿಗಳು ದಿನನಿತ್ಯದ ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್ ಗಳನ್ನು ವಶಪಡಿಸಿಕೊಂಡರು.
ಈ ಕುರಿತು ತಾಲೂಕು ಮ್ಯಾಜಿಸ್ಟ್ರೇಟ್ ಬಿಂದು ಟಿ.ಎನ್. ನೀಡಿದ ದೂರಿನ ಮೇರೆಗೆ, ವಿತರಣೆಗೆ ಸೂಚನೆ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕಿ ರಾಧಾಕೃಷ್ಣನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 170(1)(1) ಮತ್ತು 173, ಮತದಾರರ ಮೇಲೆ ಪ್ರಭಾವ ಬೀರುವುದಕ್ಕೆ ಸಂಬಂಧಿಸಿದ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123(ಎ)(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧಗಳು ಗುರುತಿಸಲಾಗದ ಸ್ವರೂಪದವುಗಳಾಗಿದ್ದು, ಮ್ಯಾಜಿಸ್ಟ್ರೇಟ್ ಅನುಮೋದನೆಯೊಂದಿಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ತಿಳಿಸಿದೆ.ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪದ್ಮಜಾ ವೇಣುಗೋಪಾಲ್ ಸ್ಪರ್ಧಿಸುತ್ತಿದ್ದಾರೆ.