ಕಲಬುರಗಿ: 2 ಬಸ್ ಮತ್ತು ಜೀಪ್ ನಡುವೆ ಭೀಕರ ಸರಣಿ ಅಪಘಾತ; ದಂಪತಿ ಸೇರಿ ಮೂವರು ಸಾವು

ಕಲಬುರಗಿ: ಎರಡು ಕೆಎಸ್ಆರ್ಟಿಸಿ ಬಸ್ ಮತ್ತು ಜೀಪ್ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ (Serial Accident) ಗಂಡ ಹೆಂಡತಿ ಸೇರಿ ಮೂವರು ಸಾವನ್ನಪ್ಪಿರುವಂತಹ (death) ಘಟನೆ ಕಲಬುರಗಿಯ ಸಂಚಾರಿ ಠಾಣೆ 1ರ ವ್ಯಾಪ್ತಿಯಲ್ಲಿ ನಡೆದಿದೆ. ಸುಲೋಚನಾ(70), ಚಂದ್ರಕಾಂತ್ (82) ಮತ್ತು ಚಾಲಕ ಮಿಟ್ಟೆಸಾಬ್(35) ಮೃತರು. ಇನ್ನು ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಡೆದದ್ದೇನು?
ಇನ್ನು ಮೃತರು ಅಫಜಲಪುರ ತಾಲ್ಲೂಕಿನ ತೆಲ್ಲೂಣಗಿ ಗ್ರಾಮದ ನಿವಾಸಿಗಳು. ದಂಪತಿ ತಮ್ಮ ಗ್ರಾಮದಿಂದ ಕಲಬುರಗಿಗೆ ಜೀಪ್ನಲ್ಲಿ ತೆರಳುತ್ತಿದ್ದರು. ಅತಿವೇಗದ ಚಾಲನೆನಿಂದ ಎದುರಿಗೆ ಬರುತ್ತಿದ್ದ ಬಸ್ಗೆ ಜೀಪ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಂಪತಿ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಕೂಡ ವಿಚಾರಿಸಿದ್ದಾರೆ.

ಕುಖ್ಯಾತ ಮನೆಗಳ್ಳನ ಬಂಧನ
ಕನ್ಯಾಕುಮಾರಿಗೆ ಕಳ್ಳತನಕ್ಕೆ ಹೊರಟ್ಟಿದ್ದ ಕುಖ್ಯಾತ ಮನೆಗಳ್ಳನನ್ನು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಮೂಲದ ನವೀನ್ ಜೋಶಿ(49) ಬಂಧಿತ ಕಳ್ಳ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣೆಯಿಂದ ಕನ್ಯಾಕುಮಾರಿಗೆ ಟಿಕೆಟ್ ಇಲ್ಲದೇ ನವೀನ್ ಪ್ರಯಾಣ ಬೆಳಸಿದ್ದ. ಟಿಕೆಟ್ ಇಲ್ಲದ ಹಿನ್ನಲೆ ಕಲಬುರಗಿಯಲ್ಲಿ ಆತನನ್ನ ಟಿಸಿ ತಡೆದಿದ್ದರು. ಹೀಗಾಗಿ ಕಲಬುರಗಿ ನಗರದ ಗಾಬರೇ ಲೇಔಟ್ನಲ್ಲಿ ಕಳ್ಳತನ ಮಾಡಿದ್ದ.
ನಿವೃತ್ತ ಆರ್ಎಫ್ಓ ಈರಣ್ಣ ಎಂಬುವವರ ಮನೆಯಿಂದ ಬರೋಬ್ಬರಿ 400 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ. ಅದರಲ್ಲಿ 230 ರೋಲ್ಡ್ ಗೋಲ್ಡ್, 167 ಗ್ರಾಂ ಅಸಲಿ ಸೇರಿದಂತೆ ಒಟ್ಟು 20.40 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಒಂದೇ ದಿನದಲ್ಲಿ ಕಳ್ಳತನ ಮಾಡಿ ನವೀನ್ ಪರಾರಿ ಆಗಿದ್ದ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಸಾವು
ಗೊನೆ ಕೊಯ್ಯುವಾಗ ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ. ಮಂಜು (35) ಮೃತ ದುರ್ದೈವಿ. ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜು, ಈ ವೇಳೆ ಮರ ಹತ್ತಿ ಗೊನೆ ಕೊಯ್ಯುವಾಗ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.