ಜಮೀರ್ ನೀಡಿದ 25 ಲಕ್ಷ ರೂ. ನಗದು ಪರಿಹಾರಕ್ಕೆ ಐಟಿ ತನಿಖೆ ಗಂಡಾಂತರ: ತೇಜಸ್ ಗೌಡ ದೂರು!

ಬಳ್ಳಾರಿ: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ಗೆ (Zameer Ahmed) ಹೊಸ ಸಂಕಷ್ಟ ಶುರುವಾಗಿದೆ. ಬಳ್ಳಾರಿ ಬ್ಯಾನರ್ ಗಲಾಟೆ ವೇಳೆ ಮಡಿದ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಸ್ಥರಿಗೆ 25 ಲಕ್ಷ ರೂ. ನಗದು ಪರಿಹಾರ ನೀಡಿದ ಆರೋಪದಡಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಐಟಿ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.


ಈ ಸಂಬಂಧ ಹಿಂದೂ ಮುಖಂಡ ತೇಜಸ್ ಗೌಡ ಅವರು ಸಚಿವ ಜಮೀರ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ. ಆರ್ಬಿಐ ನಿಯಮಗಳ ಪ್ರಕಾರ, 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುವುದು ಅಥವಾ ವಹಿವಾಟು ನಡೆಸುವುದು ಕಾನೂನುಬಾಹಿರ. ಆದರೆ, ಜಮೀರ್ ಅಹ್ಮದ್ ಖಾನ್ ಅವರು ಮೃತರ ಕುಟುಂಬಕ್ಕೆ 25 ಲಕ್ಷ ರೂ.ಯನ್ನು ನಗದು ರೂಪದಲ್ಲಿಯೇ ಪರಿಹಾರವಾಗಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ

ಈ ನಗದು ವಹಿವಾಟಿನ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ತೇಜಸ್ ಗೌಡ ಅವರು ಐಟಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ವಾಲ್ಮೀಕಿ ಪುತ್ಥಳಿ ಹಾಗೂ ಬ್ಯಾನರ್ ವಿಚಾರವಾಗಿ ಗಲಾಟೆ ವೇಳೆ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ್ ಸಾವನ್ನಪ್ಪಿದ್ದರು. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮೃತ ಕುಟುಂಬಸ್ಥರಿಗಾಗಿ ಪರಿಹಾರವಾಗಿ 25 ಲಕ್ಷ ರೂ. ಪರಿಹಾರ ನೀಡಿದ್ದರು