ನಿಮಿಷಾ ಪ್ರಿಯಾಳ ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆ ಕೊನೆಗೂ ರದ್ದಾಯಿತಾ?

ಯೆಮೆನ್:ಭಾರತ ಮತ್ತು ಯೆಮೆನ್ ಮುಖಂಡರ ಸತತ ಪ್ರಯತ್ನದ ಫಲವಾಗಿ ಕೊನೆಗೂ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆಯನ್ನು ಯೆಮೆನ್ ರದ್ದುಗೊಳಿಸಿದೆ ಎಂದು ಧರ್ಮಬೋಧಕ, ಜಾಗತಿಕ ಶಾಂತಿ ಪ್ರವರ್ತಕ ಡಾ.ಕೆ.ಎ.ಪೌಲ್ ವಿಡಿಯೋ ಸಂದೇಶದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ತಮ್ಮ ವಿಡಿಯೋ ಸಂದೇಶದಲ್ಲಿ ಡಾ.ಕೆ.ಎ.ಪೌಲ್ ಅವರು, ಯೆಮೆನ್ ಮುಖಂಡರ ಪ್ರಭಾವಶಾಲಿ ಹಾಗೂ ಪ್ರಾರ್ಥನಾ ಪೂರ್ವಕ ಪ್ರಯತ್ನಗಳಿಗೆ ಕೃತಜ್ಞತೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ಭಾರತ ಮತ್ತು ಯೆಮೆನ್ ಮುಖಂಡರು ಹಗಲಿರುಳು ನಿಮಿಷಾಳನ್ನು ಉಳಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವುದಾಗಿ ಡಾ.ಪಾಲ್ ವಿಡಿಯೋ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
“ನಿಮಿಷಾ ಪ್ರಿಯಾ ಅವರ ಮರಣದಂಡನೆ ರದ್ದಾಗುವಂತೆ ಮಾಡಲು ಶ್ರಮಿಸಿದ ಎಲ್ಲಾ ನಾಯಕರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೇವರ ದಯೆಯಿಂದ ಅವರನ್ನು ಯೆಮೆನ್ ನಿಂದ ಬಿಡುಗಡೆ ಮಾಡಿ ಭಾರತಕ್ಕೆ ಕರೆದೊಯ್ಯಲಾಗುವುದು. ನಿಮಿಷಾ ಪ್ರಾಣ ರಕ್ಷಣೆಗಾಗಿ ರಾಜತಾಂತ್ರಿಕರ ಕರೆದೊಯ್ಯಲು ನೆರವು ನೀಡಿದ ಪ್ರಧಾನಿ ಮೋದಿ ಜೀ ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ” ಪೌಲ್ ತಿಳಿಸಿದ್ದಾರೆ.
ಸನಾ ಜೈಲಿನಿಂದ ನಿಮಿಷಾ ಪ್ರಿಯಾಳನ್ನು ಓಮನ್, ಜೆಡ್ಡಾ, ಇರಾನ್ ಅಥವಾ ಟರ್ಕಿಗೆ ಸುರಕ್ಷಿತವಾಗಿ ವಾಪಸ್ ಕಳುಹಿಸಲು ಭಾರತ ಸರ್ಕಾರದೊಂದಿಗೆ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡುವ ನಿರೀಕ್ಷೆ ಇರುವುದಾಗಿ ಪೌಲ್ ಹೇಳಿದರು.
ಕಳೆದ ವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದ ವಿದೇಶಾಂಗ ಸಚಿವಾಲಯ, ಯೆಮೆನ್ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿತ್ತು. ಅಲ್ಲದೇ ಸನಾದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲಾ ನೆವು ನೀಡುವುದಾಗಿ ಹೇಳಿತ್ತು.
ನಿಮಿಷಾ ಪ್ರಿಯಾ ಯಾರು?
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ನ 38 ವರ್ಷದ ನರ್ಸ್ ನಿಮಿಷಾ ಪ್ರಿಯಾ, 2017 ರಲ್ಲಿ ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಳು. 2020 ರಲ್ಲಿ, ಆಕೆಗೆ ಯೆಮೆನ್ ನ್ಯಾಯಾಲಯವು ಮರಣದಂಡನೆ ವಿಧಿಸಿತು ಮತ್ತು ಅವರ ಅಂತಿಮ ಮೇಲ್ಮನವಿಯನ್ನು 2023 ರ ನವೆಂಬರ್ನಲ್ಲಿ ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ತಿರಸ್ಕರಿಸಿತು. ಅವರು ಪ್ರಸ್ತುತ ಇರಾನ್ ಬೆಂಬಲಿತ ಹೌತಿ ಬಂಡುಕೋರರಿಂದ ನಿಯಂತ್ರಿಸಲ್ಪಡುವ ರಾಜಧಾನಿ ಸನಾದಲ್ಲಿ ಬಂಧನದಲ್ಲಿದ್ದಾರೆ.
ಪ್ರಿಯಾ ಅವರನ್ನು ಜುಲೈ 16 ರ ಬುಧವಾರ ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಸಂತ್ರಸ್ತೆಯ ಕುಟುಂಬದೊಂದಿಗೆ ಸಂಭಾವ್ಯ ಇತ್ಯರ್ಥಕ್ಕೆ ಹೆಚ್ಚಿನ ಸಮಯದ ಅವಕಾಶಕ್ಕಾಗಿ ಭಾರತವು ತ್ತಡ ಹೇರಿದ ನಂತರ ಯೆಮೆನ್ ಅಧಿಕಾರಿಗಳು ಅವರ ಮರಣದಂಡನೆಯನ್ನು ಮುಂದೂಡಿದ್ದರು.
ಪ್ರಿಯಾಳ ತಾಯಿ ಪ್ರೇಮಕುಮಾರಿ ಕಳೆದ ವರ್ಷ ತನ್ನ ಮಗಳ ಬಿಡುಗಡೆಗಾಗಿ ಮನವಿ ಮಾಡಲು ಯೆಮೆನ್ಗೆ ಪ್ರಯಾಣ ಬೆಳೆಸಿದ್ದರು. ಕೇರಳದ ಸುನ್ನಿ ಧರ್ಮಗುರು ಒಬ್ಬರು ಪ್ರಮುಖ ಯೆಮೆನ್ ಧಾರ್ಮಿಕ ವಿದ್ವಾಂಸರನ್ನು ಸಂಪರ್ಕಿಸಿ ಮಧ್ಯಪ್ರವೇಶ ಕೋರಿದರು. ಈ ಪ್ರಯತ್ನಗಳ ಹೊರತಾಗಿಯೂ, ಯೆಮೆನ್ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಔಪಚಾರಿಕ ರಾಜತಾಂತ್ರಿಕ ಸಂಬಂಧಗಳ ಕೊರತೆಯಿಂದಾಗಿ ಸಂಧಾನ ಮಾತುಕತೆಯಲ್ಲಿ ವಿಳಂಬವಾಗಿತ್ತು. ಇದೀಗ ಪೌಲ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ನಿಮಿಷಾ ಪ್ರಿಯಾಳ ಗಲ್ಲುಶಿಕ್ಷೆ ರದ್ದಾಗಿರುವುದಾಗಿ ತಿಳಿಸಿದ್ದಾರೆ.
