ಮುಂದಿನ 3 ದಿನ ಸಮುದ್ರ ತೀರದಲ್ಲಿ ಹೈ ಅಲರ್ಟ್; ಮೀನುಗಾರರು ಕಡಲಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ!

ಮಂಗಳೂರು : ಕರ್ನಾಟಕ ಕರಾವಳಿ ಸೇರಿದಂತೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಿರುಗಾಳಿ ಹಾಗೂ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತ ಸರ್ಕಾರದ ಗೃಹ ಸಚಿವಾಲಯದ ತುರ್ತು ಪ್ರತಿಕ್ರಿಯೆ ಸಮಗ್ರ ನಿಯಂತ್ರಣ ಕೊಠಡಿ (ICR-ER) ಮೇ 18 ರಂದು ವಿಶೇಷ ಎಚ್ಚರಿಕೆ ಪ್ರಕಟಣೆ ಬಿಡುಗಡೆ ಮಾಡಿದೆ.ಗಂಟೆಗೆ 65 ಕಿ.ಮೀ ವೇಗದ ಗಾಳಿ: ಮೇ 18 ರಿಂದ 21 ರವರೆಗೆ ಕರ್ನಾಟಕ, ಕೇರಳ ಕರಾವಳಿ, ಲಕ್ಷದ್ವೀಪ ಪ್ರದೇಶ, ಕೊಮೊರಿನ್ ಭಾಗ ಹಾಗೂ ದಕ್ಷಿಣ ಪಶ್ಚಿಮ ಅರಬ್ಬೀ ಸಮುದ್ರ ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 55 ಕಿಲೋಮೀಟರ್ ವೇಗದಲ್ಲಿ ಭೀಕರ ಗಾಳಿ ಬೀಸುವ ಸಾಧ್ಯತೆ ಇದೆ. ಕೆಲವೆಡೆ ಗಾಳಿಯ ವೇಗವು ಗಂಟೆಗೆ ಬರೋಬ್ಬರಿ 65 ಕಿಲೋಮೀಟರ್ವರೆಗೆ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆಯ ವರದಿ ಉಲ್ಲೇಖಿಸಿ ಎಚ್ಚರಿಸಲಾಗಿದೆ.

ಇದೇ ವೇಳೆ ಗಲ್ಫ್ ಆಫ್ ಮನ್ನಾರ್, ಶ್ರೀಲಂಕಾ ಕರಾವಳಿ, ದಕ್ಷಿಣ ಪಶ್ಚಿಮ ಮತ್ತು ದಕ್ಷಿಣ ಪೂರ್ವ ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ಪ್ರದೇಶಗಳಲ್ಲಿಯೂ ಸಮುದ್ರದ ಅಲೆಗಳು ಅತ್ಯಂತ ಪ್ರಬಲವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕರ್ನಾಟಕ ಕರಾವಳಿಯ ಮೀನುಗಾರರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹವಾಮಾನ ಇಲಾಖೆಯ ಮುಂದಿನ ಸೂಚನೆಗಳನ್ನು ಗಮನಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.