ಚಿತ್ರರಂಗದ ದೈತ್ಯ ನಿರ್ಮಾಪಕ ಆರ್ಬಿ ಚೌಧರಿ ಇನ್ನಿಲ್ಲ: ಉದಯಪುರದಲ್ಲಿ ಸಂಭವಿಸಿದ ರಸ್ತೆ ಅಪಘಾ*ತಕ್ಕೆ ಬಲಿ

ಚೆನ್ನೈ/ಉದಯಪುರ: ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಿರ್ಮಾಪಕ, ‘ಸೂಪರ್ ಗುಡ್ ಫಿಲ್ಮ್ಸ್’ ಸಂಸ್ಥೆಯ ಸಂಸ್ಥಾಪಕ ಆರ್ಬಿ ಚೌಧರಿ (RB Choudary) ಅವರು ಮಂಗಳವಾರ (ಮೇ 5) ರಾಜಸ್ಥಾನದ ಉದಯಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಮೂಲಗಳ ಪ್ರಕಾರ, ಆರ್ಬಿ ಚೌಧರಿ ಅವರು ಉದಯಪುರ ಪ್ರವಾಸದಲ್ಲಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅವರ ಪಾರ್ಥಿವ ಶರೀರವನ್ನು ನಾಳೆ (ಮೇ 6) ಅಂತಿಮ ವಿಧಿವಿಧಾನಗಳಿಗಾಗಿ ಚೆನ್ನೈಗೆ ತರಲಾಗುವುದು ಎಂದು ತಿಳಿದುಬಂದಿದೆ.
ಸುಮಾರು 4 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಆರ್ಬಿ ಚೌಧರಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದರು. ತಮಿಳು ನಟ ವಿಜಯ್ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ‘ಪೂವೆ ಉನಕ್ಕಾಗಿ’ ಸೇರಿದಂತೆ ಅನೇಕ ಹಿಟ್ ಚಿತ್ರಗಳು ಇವರ ನಿರ್ಮಾಣದಲ್ಲಿ ಬಂದಿವೆ.
ಆರ್ಬಿ ಚೌಧರಿ ಅವರ ನಿಧನಕ್ಕೆ ರಜನಿಕಾಂತ್, ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ದಕ್ಷಿಣದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
“ನನ್ನ ಆಪ್ತ ಗೆಳೆಯ, ಉತ್ತಮ ನಿರ್ಮಾಪಕನನ್ನು ಕಳೆದುಕೊಂಡಿದ್ದೇನೆ,” ಎಂದು ರಜನಿಕಾಂತ್ ಕಂಬನಿ ಮಿಡಿದಿದ್ದಾರೆ.
“ಅನೇಕ ಪ್ರತಿಭಾವಂತ ನಿರ್ದೇಶಕರಿಗೆ ಬದುಕು ನೀಡಿದ ಮಹಾನ್ ಚೇತನ,” ಎಂದು ಮೆಗಾಸ್ಟಾರ್ ಚಿರಂಜೀವಿ ಸ್ಮರಿಸಿದ್ದಾರೆ.
ಮೂಲತಃ ರಾಜಸ್ಥಾನದವರಾದ ಚೌಧರಿ ಅವರು ಚೆನ್ನೈನಲ್ಲಿ ನೆಲೆಸಿದ್ದರು. ಅವರ ನಾಲ್ವರು ಪುತ್ರರಲ್ಲಿ ಜಿತನ್ ರಮೇಶ್ ಮತ್ತು ಖ್ಯಾತ ನಟ ಜೀವಾ (Jiiva) ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ನಿಧನದಿಂದ ಚಿತ್ರರಂಗವು ಒಬ್ಬ ದಕ್ಷ ಮತ್ತು ಮೌಲ್ಯಯುತ ನಿರ್ಮಾಪಕನನ್ನು ಕಳೆದುಕೊಂಡಂತಾಗಿದೆ.