ಕೋಲಾರದಲ್ಲಿ ರೈತನ ಮನೆಗೆ ಬೆಂಕಿ: ಕಿಡಿಗೇಡಿಗಳ ಕೃತ್ಯದಿಂದ ₹4 ಲಕ್ಷ ನಷ್ಟ

ಕೋಲಾರ: ಕಿಡಿಗೇಡಿಗಳು ಮನೆಗೆ ಬೆಂಕಿ (Fire) ಹಾಕಿದ ಪರಿಣಾಮ ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚೀಟಿಂವಾರಪಲ್ಲಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಚೀಟಿಂವಾರಪಲ್ಲಿ ಗ್ರಾಮದ ರೈತ ಜಯರಾಮ್ ಎಂಬವರಿಗೆ ಸೇರಿದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಹಿನ್ನೆಲೆ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಜಯರಾಮ್ ಅವರು ಊರಿನಲ್ಲಿ ಮನೆ ಕೆಲಸ ಮಾಡಿಸುತ್ತಿರುವ ಕಾರಣ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ತೋಟದ ಮನೆಯಲ್ಲಿಡಲಾಗಿತ್ತು.
ಬೆಂಕಿಯಿಂದ ಮನೆಯಲ್ಲಿದ್ದ ರಸಗೊಬ್ಬರ, ಮನೆ ಸಾಮಾನುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸುಮಾರು 4 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬೆಂಕಿಯಿಟ್ಟಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ
