ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಜಗಳ; ಆಟೋ ಚಾಲಕನ ಭೀಕರ ಕೊ*ಲೆ

ಬೆಂಗಳೂರು: ಮನೆಯ ಮುಂದೆ ಆಟೋ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಪಕ್ಕದಮನೆ ವ್ಯಕ್ತಿಯೊಬ್ಬ ಜಗಳ ಮಾಡಿ ಹಲ್ಲೆ ನಡೆಸಿ ಆಟೋ ಚಾಲಕನನ್ನು ಕೊಲೆಗೈದಿರುವ ಘಟನೆ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೆ.ಜೆ.ನಗರದ 9ನೇ ಮುಖ್ಯ ರಸ್ತೆ ನಿವಾಸಿ ಮುಬಾರಕ್(26) ಕೊಲೆಯಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಈ ಸಂಬಂಧ ಜೆ.ಜೆ.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ತಬ್ರೇಝ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ದಿನವೂ ಮುಬಾರಕ್ ಆಟೋ ಬಾಡಿಗೆಗೆ ಹೋಗಿ ರಾತ್ರಿ ವಾಪಸ್ ಬಂದು ತಬ್ರೇಮ್ನ ಮನೆ ಬಳಿ ಆಟೋ ಪಾರ್ಕಿಂಗ್ ಮಾಡುತ್ತಿದ್ದ. ಅದರಂತೆ ಮೇ 1ರ ರಾತ್ರಿ 8.30ರ ಸುಮಾರಿನಲ್ಲಿ ಆಟೋ ನಿಲ್ಲಿಸಿದ ವೇಳೆ ಪಕ್ಕದಮನೆಯ ತಬ್ರೇಝ್ ಎಂಬಾತ ತಮ್ಮ ಮನೆ ಬಳಿ ಏಕೆ ಆಟೋ ನಿಲ್ಲಿಸಿದ್ದೀಯ ಎಂದು ಜಗಳ ಪ್ರಾರಂಭಿಸಿದ್ದಾನೆ. ಈ ವೇಳೆ, ಇಬ್ಬರ ನಡುವೆ ಮಾತಿನ ಸಮರ ತಾರಕಕ್ಕೇರಿದೆ. ತಬ್ರೇಝ್ ಕೈಗೆ ಸಿಕ್ಕಿದ ಮರದ ಪಟ್ಟಿಯಿಂದ ಮುಬಾರಕ್ ತಲೆಗೆ ಹೊಡೆದಾಗ ಆತ ಕುಸಿದು ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಮುಬಾರಕ್ನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ. ಚಿಕಿತ್ಸೆ ಫಲಿಸದೇ ಮೇ2ರ ತಡರಾತ್ರಿ ಮೃತಪಟ್ಟಿದ್ದಾರೆ.
