ಫಾರ್ಚುನರ್ ರಕ್ಷಿಸಿದ ಗಜಬಲ: ಕೇರಳದಲ್ಲಿ ಆನೆಯಿಂದ ಮನುಷ್ಯನಿಗೆ ಬೆಂಬಲ

ಕೇರಳ: ಆನೆಗಳು ನೋಡುವುದಕ್ಕೆ ಮಾತ್ರ ದೈತ್ಯಾಕಾರವಾಗಿಲ್ಲ, ಶಕ್ತಿ ಹಾಗೂ ಬಲಿಷ್ಠತೆಯಲ್ಲಿಯೂ ಉಳಿದ ಪ್ರಾಣಿಗಳನ್ನು ಮೀರಿಸುತ್ತದೆ. ಎಷ್ಟೇ ತೂಕದ ವಸ್ತುವಿರಲಿ ಎತ್ತಿ ಬಿಸಾಡುವ ಸಾಮರ್ಥ್ಯ ಈ ಗಜರಾಜನಿಗೆ ಇದೆ. ಇದೀಗ ನದಿಯಲ್ಲಿ ಸಿಲುಕಿದ ಟೊಯೋಟೊ ಫಾರ್ಚುನರ್ ಕಾರನ್ನು ಎಳೆದು ರಕ್ಷಿಸಿದ ಘಟನೆಯೂ ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಲಂ ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ನದಿಯಲ್ಲಿ ಸಿಲುಕಿದ್ದ ಕಾರಿನ ಹಿಂಭಾಗಕ್ಕೆ ಹಗ್ಗವನ್ನು ಕಟ್ಟಿರುವುದನ್ನು ಕಾಣಬಹುದು. ಆನೆಯು ಈ ಹಗ್ಗವನ್ನು ತನ್ನ ಸೊಂಡಿಲಿನಲ್ಲಿ ಗಟ್ಟಿಯಾಗಿ ಹಿಡಿದು ಕ್ಷಣಾರ್ಧದಲ್ಲಿ ಕಾರನ್ನು ಎಳೆದು ಹೊರ ತೆಗೆದಿದೆ.
ಅಷ್ಟೇನು ಆಳವಿಲ್ಲದ ನದಿಯಲ್ಲಿ ಟೊಯೋಟೊ ಫಾರ್ಚುನರ್ ಕಾರೊಂದು ಸಿಲುಕಿಕೊಂಡಿದೆ. ಕಾರಿನ ಚಕ್ರಗಳು ಮಣ್ಣಿನಲ್ಲಿ ಸಿಲುಕಿಕೊಂಡಿದ್ದು ಎಷ್ಟೇ ಹೊರ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಮುಂದೇನು ಮಾಡುವುದು ಎಂದು ಕಾರು ಮಾಲೀಕ ಯೋಚಿಸುತ್ತಿರುವಾಗಲೇ ನೆನಪಿಗೆ ಬಂದದ್ದು ಈ ಗಜರಾಜ. ಈ ಕಾರು ಮಾಲೀಕ ತಿರುವೇಗಪುರದ ಶಂಕರನಾರಾಯಣನ್ ಎಂಬ ಆನೆಯ ಮಾಲೀಕನನ್ನು ಸಂಪರ್ಕಿಸಿದ್ದು ಸಹಾಯವನ್ನು ಯಾಚಿಸಿದ್ದಾರೆ. ಈ ವೇಳೆಯಲ್ಲಿ ಆನೆಯ ಮಾಲೀಕನು ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಕೊನೆಗೆ ನದಿಯಲ್ಲಿ ಸಿಲುಕಿದ್ದ ಕಾರನ್ನು ಆನೆಯು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.
ಈ ವಿಡಿಯೋವೊಂದು ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋಗೆ ಬಳಕೆದಾರರೊಬ್ಬರು, ಮನುಷ್ಯನು ತನ್ನ ಸಹಾಯಕ್ಕಾಗಿ ಈ ದೈತ್ಯ ಶಕ್ತಿಶಾಲಿ ಪ್ರಾಣಿಯನ್ನು ಹೇಗೆ ಪಳಗಿಸುತ್ತಾರೆ ಎಂಬುವ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನನ್ನ ಪ್ರಕಾರ ಈ ದೊಡ್ಡ ಪ್ರಾಣಿ ಬಯಸಿದರೆ ಕ್ಷಣಾರ್ದದಲ್ಲಿ ಪುಡಿ ಮಾಡಬಲ್ಲದು. ಆದರೆ ನಾವು ಈ ಪ್ರಾಣಿಗಳನ್ನು ಸಹಾಯಕ್ಕಾಗಿ ಬಳಸಿಕೊಳ್ಳುತ್ತೇವೆ ಎಂದಿದ್ದಾರೆ.
ಮತ್ತೊಬ್ಬರು, ಆನೆಗಳು ಅತ್ಯುತ್ತಮ ಸ್ಮರಣ ಶಕ್ತಿಯನ್ನು ಹೊಂದಿದೆ. ಹಲವು ವರ್ಷಗಳ ನಂತರವು ಅವು ಮನುಷ್ಯರನ್ನು ಹಾಗೂ ಸ್ಥಳಗಳನ್ನು ಗುರುತಿಸಬಲ್ಲದು ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು, ವಿದೇಶಿಗರು ಕಾರನ್ನು ಎತ್ತಲು ಕ್ರೇನ್ ಬಳಸುತ್ತಾರೆ. ಆದರೆ ಭಾರತೀಯರು ಸಹಾಯಕ್ಕಾಗಿ ಪ್ರಕೃತಿಯನ್ನು ಕರೆಯುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.