ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾದ ನಾಲ್ವರು ಸರ್ಕಾರಿ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

ಬೀದರ್: ಆರ್ಎಸ್ಎಸ್ (RSS) ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ಶಿಕ್ಷಣ ಇಲಾಖೆ (Education Department) ನೋಟಿಸ್ ನೀಡಿದೆ.

ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಸರ್ಕಾರಿ ಶಿಕ್ಷಕರಾದ ಮಹಾದೇವ್ ಚಿಟ್ಗೆರೆ, ಶಾಲಿವಾನ್, ಪ್ರಕಾಶ್ ಬರ್ದಾಪುರೆ, ಸತೀಶ್ ಎಂಬುವವರು ಅ.7 ಮತ್ತು ಅ.13ರಂದು ಔರಾದ್ನಲ್ಲಿ ನಡೆದಿದ್ದ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆ ದಲಿತ ಸೇನೆ ಮುಖಂಡರು ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅ.27ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು
ದೂರು ಸಲ್ಲಿಸಿದ ಮರುದಿನವೇ ನಾಲ್ಕು ಜನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ನೀಡಿದ್ದಾರೆ. ಸರ್ಕಾರಿ ನೌಕರರು ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ. ನೀವು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ಸರ್ಕಾರದ ಸೇವಾ ನಿಬಂಧನೆಗೆ ವಿರುದ್ಧವಾಗಿ ಕರ್ತವ್ಯ ಮಾಡಿದ್ದೀರಿ. ಹೀಗಾಗಿ ಖುದ್ದಾಗಿ ಕಚೇರಿಗೆ ಬಂದು ಹೇಳಿಕೆ ನೀಡಿ, ಇಲ್ಲದಿದ್ರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ಉಲ್ಲೇಖಿಸಿದ್ದಾರೆ.