ವೈದ್ಯರ ಮನೆಗೆ ಬೆಂಕಿ: ನಾಲ್ವರು ಬಂಧನ, ಸುಪಾರಿ ನೀಡಿದ ರವಿ ನಾಪತ್ತೆ

ಬೆಂಗಳೂರು: ವೈದ್ಯರೊಬ್ಬರ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಜ್ವಲ್, ರಾಕೇಶ್, ಸಚಿನ್ ಹಾಗೂ ಜೀವನ್ ಎಂಬುವವರನ್ನು ಬಂಧಿಸಿದ್ದು, ಬೆಂಕಿ ಹಚ್ಚಲು ಸುಪಾರಿ ನೀಡಿದ್ದ ಪ್ರಮುಖ ಆರೋಪಿ ರವಿ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಗೆ ₹50 ಸಾವಿರ ನೀಡಿ, ಗಂಗಾಧರ್ ಅವರ ಮನೆ ತೋರಿಸಿ ಬೆಂಕಿ ಹಚ್ಚಲು ಬಿಜೆಪಿ ಶಾಸಕರೊಬ್ಬರ ಆಪ್ತ ರವಿ ಹೇಳಿದ್ದ. ಆತನ ಸೂಚನೆಯಂತೆ ಬೆಂಕಿ ಹಚ್ಚಲಾಗಿದೆ. ಇದಕ್ಕಾಗಿ ಎಲೆಕ್ಟ್ರಾನಿಕ್ ಸಿಟಿಯಿಂದ 40 ಲೀಟರ್ ಪೆಟ್ರೋಲ್ ತರಲಾಗಿತ್ತು ಎಂಬ ವಿಷಯವನ್ನು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ. ಬಂಧಿತರು ಈ ಹಿಂದೆ ಪ್ರಕರಣವೊಂದರಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರ ಬಂದಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.
‘ರವಿಯ ಸೂಚನೆಯಂತೆ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ. ಕೃತ್ಯಕ್ಕೆ ಕಾರಣ ನಿಗೂಢವಾಗಿದ್ದು, ಆತನ ಬಂಧನದ ಬಳಿಕವಷ್ಟೇ ಯಾವ ಕಾರಣಕ್ಕಾಗಿ ಗಂಗಾಧರ್ ಮನೆಗೆ ಬೆಂಕಿ ಹಚ್ಚಲು ಹೇಳಿದ್ದ ಎಂಬುದು ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 10ರ ನಡು ರಾತ್ರಿ ಬಾಪೂಜಿ ಲೇಔಟ್ನ 4ನೇ ಕ್ರಾಸ್ನಲ್ಲಿ ಘಟನೆ ನಡೆದಿತ್ತು. ಎರಡು ಬೈಕ್ಗಳಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಆರೋಪಿಗಳು ಡಾ. ಬಿ. ಎಸ್. ಗಂಗಾಧರ್ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಆರೋಪಿಗಳಿಗೂ ಬೆಂಕಿ ತಾಗಿದ್ದು, ತಕ್ಷಣ ಅಲ್ಲಿಂದ ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಘಟನೆಯಲ್ಲಿ ಮನೆಯ ಭದ್ರತಾ ಸಿಬ್ಬಂದಿ ತ್ಯಾಗರಾಜ್ ಗಾಯಗೊಂಡಿದ್ದರು. ಕಾರು ಸೇರಿ ಸುಮಾರು ₹ 45 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಚಾಕು ಸಹ ಸ್ಥಳದಲ್ಲಿ ಪತ್ತೆಯಾಗಿತ್ತು.