ಸಂಘಟನೆಯ ಏಳಿಗೆ ಸಹಿಸದೆ ಅಪಪ್ರಚಾರ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ; ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಕಿಡಿ

ಕಾಸರಗೋಡು : ಕರ್ನಾಟಕದ ಜನಪ್ರಿಯ ಶಾಸಕರ ದಕ್ಷ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಈ ಬಾರಿ ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಮಂಜೇಶ್ವರ ಕ್ಷೇತ್ರದಲ್ಲಿ ಪಕ್ಷವು ತನ್ನ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮತಗಳನ್ನು ಧ್ರುವೀಕರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಕೇರಳ ರಾಜ್ಯದಲ್ಲೇ ಬಿಜೆಪಿಗೆ ಅತಿ ಹೆಚ್ಚು ಮತಗಳನ್ನು ತಂದುಕೊಟ್ಟ ಹೆಗ್ಗಳಿಕೆ ಈ ಎರಡೂ ಕ್ಷೇತ್ರಗಳಿಗೆ ಸಲ್ಲುತ್ತದೆ.

ಆದರೆ, ಈ ಪ್ರಚಂಡ ಬೆಳವಣಿಗೆಯನ್ನು ಸಹಿಸದ ಕೆಲವು ಹಿತಶತ್ರುಗಳು ಸೋಲಿನ ಭೀತಿಯಿಂದಾಗಿ ಪಕ್ಷದ ವಿರುದ್ಧ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ‘ಮಿಕ್ಸ್ ಶಾಟ್ ನ್ಯೂಸ್’ (Mix Shot News) ವಾಹಿನಿಯು ಸತ್ಯಕ್ಕೆ ದೂರವಾದ ಹಸಿ ಹಸಿ ಸುಳ್ಳುಗಳನ್ನು ಪ್ರಸಾರ ಮಾಡುತ್ತಾ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಮಾಧ್ಯಮದ ಹೆಸರಿನಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿರುವ ಇಂತಹ ಪಿತೂರಿಗಳ ವಿರುದ್ಧ ಮೃದು ಧೋರಣೆ ತಳೆಯುವ ಪ್ರಶ್ನೆಯೇ ಇಲ್ಲ.
ಈಗಾಗಲೇ ಈ ವಾಹಿನಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಸುಳ್ಳು ಸುದ್ದಿಗಳ ಮೂಲಕ ನಮ್ಮ ಸಂಘಟನೆಯ ಶಕ್ತಿಯನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ತಿಳಿಸಿದ್ದಾರೆ.