ಖತರ್ನಾಕ್ ಕಳ್ಳಿಯ ತಂತ್ರ ಮಂಗಳೂರಲ್ಲೂ ಪತ್ತೆ-ವಂಚನೆಯೇ ಆಕೆಯ ಕಾಯಕ

ಮಂಗಳೂರು:ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಬಯಲಾಗಿರುವ ವಂಚಕಿಯ ಇತಿಹಾಸ ಕೆದಕುತ್ತಾ ಹೋದಷ್ಟು ಪುಟಗಳು ತೆರೆದುಕೊಳ್ಳುತ್ತವೆ.

ಶಿರ್ವ ಪ್ರಕರಣಕ್ಕೆ ಮುನ್ನ ಆಕೆ ಬಜಪೆ ಸುತ್ತಮುತ್ತ ಇದೇ ರೀತಿಯಲ್ಲಿ ವಂಚಿಸಿದ್ದಳು. ಅಷ್ಟೇ ಅಲ್ಲ, ಈ ವಂಚಕಿ ಮಂಗಳೂರಿನ ಹಲವೆಡೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣಗಳು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲೂ ಈ ಹಿಂದೆ ದಾಖಲಾಗಿವೆ.
ಬಜಪೆ, ಮೂಡುಬಿದಿರೆ ಮತ್ತು ಕಾವೂರು ಠಾಣಾ ವ್ಯಾಪ್ತಿಯಲ್ಲಿ ಇದೇ ಮಾದರಿಯ ಪ್ರಕರಣ ನಡೆದಿದ್ದು, “ಫರೀದಾ’ ಎನ್ನುವ ಹೆಸರಿನಲ್ಲಿಯೇ ಆಕೆ ಆಭರಣ ಅಂಗಡಿಗಳ ಮಾಲಕರಿಗೆ ವಂಚಿಸಿದ್ದಾಳೆ.
ಈ ಪ್ರಕರಣಗಳು ಸೆನ್ ಠಾಣೆಗೆ ವರ್ಗಾವಣೆಗೊಂಡು, ಪೊಲೀಸರು ಈ ಪ್ರಕರಣಗಳಲ್ಲಿ ಆಕೆಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲ ಯದಿಂದ ಆಕೆ ಜಾಮೀನೂ ಪಡೆದಿದ್ದಳು. ಪೊಲೀಸರು ಈ ಮೂರೂ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಕುಪ್ಪೆಪದವು ಮೂಲದ ಮಹಿಳೆ
ಫರೀದಾ ಎಡಪದವು ಬಳಿಯ ಕುಪ್ಪೆಪದವು ನಿವಾಸಿ ಯಾಗಿದ್ದು, ಪತಿ, ತಂದೆ, ತಮ್ಮ, ಚಿಕ್ಕಮ್ಮ ಎಲ್ಲರೂ ಈಕೆಯ ಕೃತ್ಯಕ್ಕೆ ಸಹಕರಿಸಿದ ಆರೋಪವಿದೆ. ಆಭರಣ ಅಂಗಡಿಗಳಿಗೆ ಮಾತ್ರವಲ್ಲದೆ ತರಕಾರಿ ಅಂಗಡಿ, ಮೀನು ಮಾರ್ಕೆಟ್ ಸೇರಿದಂತೆ ಎಲ್ಲೆಡೆ ಇದೇ ಮಾದರಿಯ ವಂಚನೆ ಮಾಡಿದ್ದು, ಐಷಾರಾಮಿ ಕಾರುಗಳನ್ನು ಬಾಡಿಗೆ ಪಡೆದು ಓಡಾಡುತ್ತಿದ್ದಳು ಎನ್ನುತ್ತಾರೆ ಸ್ಥಳೀಯರು.
ಒಂದೆಡೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೆ, ಇನ್ನೊಂದು ಕಡೆ ತನ್ನ ಕೃತ್ಯವನ್ನು ಮುಂದುವರಿಸಿದ್ದಳು. ಶಿರ್ವ ಪ್ರಕರಣ ಇದಕ್ಕೊಂದು ಉದಾಹರಣೆ.ಆಭರಣ ಅಂಗಡಿ ಮಾಲಕರೂ ದೊಡ್ಡ ಮೊತ್ತದ ವಹಿವಾಟಿನ ಆಸೆಗೆ ಬಿದ್ದು ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಬಜಪೆ ಪೊಲೀಸರಿಂದ ಬಂಧನ
ಬಜಪೆ ಠಾಣಾ ವ್ಯಾಪ್ತಿಯ ಕೈಕಂಬದಲ್ಲಿರುವ ಜುವೆಲರ್ಸ್ವೊಂದರಿಂದ ನಕಲಿ ದಾಖಲೆ ಮತ್ತು ಸಹಿ ಮಾಡಿದ ಚೆಕ್ ನೀಡಿ ಹಂತ ಹಂತವಾಗಿ ಒಟ್ಟು 7.3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಖರೀದಿಸಿದ್ದು ಈ ಬಗ್ಗೆ ಬಜಪೆ ಠಾಣೆಯಲ್ಲಿ 2020 ರ ಸೆ. 28 ರಂದು ಮಾಲಕ ಎಸ್.ಆನಂದ ಆಚಾರಿ ದೂರು ನೀಡಿದ್ದರು. ಪ್ರಕರಣ ದಾಖಲಾಗಿತ್ತು. ಇದಕ್ಕೊ ಮೊದಲು ಮೂಡುಬಿದಿರೆ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯಿಂದ ನಕಲಿ ಚೆಕ್ ನೀಡಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಪ್ರಭಾಕರ ಆಚಾರಿ ಅವರಿಗೆ ವಂಚಿಸಿದ ಪ್ರಕರಣವೂ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅ.19ರಂದು ಕುಪ್ಪೆಪದವು ಮುರ ಹೌಸ್ನ ಫರೀದಾ ಬೇಗಂಳನ್ನು ಬಂಧಿಸಲಾಗಿತ್ತು. ಆಕೆಯಿಂದ ಬಜಪೆ ಮತ್ತು ಮೂಡು ಬಿದಿರೆ ವಂಚನೆಗೆ ಸಂಬಂಧಿಸಿ 12ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಕಾವೂರಿನಲ್ಲಿಯೂ ವಂಚನೆ
ಈಕೆಯ ಮೇಲೆ ಕಾವೂರು ಠಾಣೆಯಲ್ಲಿ ಎಪ್ರಿಲ್ನಲ್ಲಿ ಪ್ರಕರಣ ದಾಖಲಾಗಿದೆ. ಮಾ.25ರಂದು ಅಲ್ಲಿಯ ಚಿನ್ನದ ಅಂಗಡಿಯೊಂದರ ಮಾಲಕರಿಗೆ ದೂರವಾಣಿ ಮೂಲಕ ತನ್ನನ್ನು ಕುಂಜತ್ತಬೈಲು ನಿವಾಸಿ ಎಂದು ಪರಿಚಯಿಸಿಕೊಂಡು, ಮಗುವಿನ ನಾಮಕರಣಕ್ಕೆ ಒಂದು ಚಿನ್ನದ ಬ್ರಾಸ್ಲೆಟ್, ಒಂದು ಚೈನ್, ಎರಡು ಉಂಗುರ ಬೇಕಿದೆ ಎಂದು ವಾಟ್ಸ್ಆಯಪ್ನಲ್ಲಿ ಡಿಸೈನ್ ಕೇಳಿದ್ದಳು. ಅಂಗಡಿ ಮಾಲಕರು ಚಿತ್ರಗಳನ್ನು ಕಳುಹಿ ಸಿದ್ದು, ಆಕೆ 4 ಆಭರಣಗಳನ್ನು ಆಯ್ಕೆ ಮಾಡಿ, ಹುಡುಗ ನೊಬ್ಬನನ್ನು ಕಳುಹಿಸುತ್ತೇನೆ, ಆತನಲ್ಲಿ ಚಿನ್ನ ಕೊಡಿ ಎಂದಿದ್ದಳು. ಬ್ಯಾಂಕ್ಗೆ ಹಣ ಹಾಕಿದ 1.36 ಲಕ್ಷ ರೂ. ಮೊತ್ತದ ಚೀಟಿಯನ್ನೂ ಕಳುಹಿಸಿದಳು. ಚಿನ್ನ ಕೊಟ್ಟು ಎರಡು ದಿನವಾದರೂ ಖಾತೆಗೆ ಹಣ ಬಾರದಿದ್ದಾಗ ಮಾಲಕರು ತಮಗಾದ ವಂಚನೆ ಸಂಬಂಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆಕೆಯಿಂದ ವಂಚನೆಗೆ ಒಳಗಾದ ಕೈಕಂಬದ ಜುವೆಲ್ಲರಿ ಮಾಲಕ ಆನಂದ ಆಚಾರಿ ಹೇಳುವಂತೆ, ಮೋಸ ಮಾಡು ವುದೇ ಆಕೆಯ ಕೆಲಸ. ನನಗೆ ಬರಬೇಕಿದ್ದ ಮೊತ್ತವನ್ನು ಪೊಲೀಸರ ಸಹಕಾರದಿಂದ ವಾಪಸ್ ಪಡೆದೆ. ಆಕೆಯ ಮೋಸದ ಬಗ್ಗೆ ಹಲವರನ್ನು ಎಚ್ಚರಿಸಿರುವೆ ಎಂದರು.
ಫರೀದಾ ಎನ್ನುವ ಮಹಿಳೆ ಕಮಿಷನರೇಟ್ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿಗಳ ಮಾಲಕರಿಗೆ ವಂಚಿಸಿದ್ದಾಳೆ. ಈ ಬಗ್ಗೆ ಪ್ರಕರಣಗಳು ದಾಖಲಾಗಿದ್ದು, ಆರ್ಥಿಕ ಅಪರಾಧ ಆಗಿರುವ ಹಿನ್ನೆಲೆಯಲ್ಲಿ ಆಯಾ ಠಾಣೆಯಿಂದ ಪ್ರಕರಣಗಳನ್ನು ಸೆನ್ ಠಾಣೆಗೆ ವರ್ಗಾಯಿಸಲಾಗಿದೆ. ಪೊಲೀಸರು ತನಿಖೆ ಮುಗಿಸಿ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿದೆ.
-ಕೆ. ರವಿಶಂಕರ್, ಡಿಸಿಪಿ,ಅಪರಾಧ ಮತ್ತು ಸಂಚಾರ
