ವೈದ್ಯರಿಲ್ಲದೆ ಹೆರಿಗೆ – ಪತ್ನಿಯ ಮರಣ, ಪತಿಯ ಬಂಧನ

ತಿರುವನಂತಪುರಂ : ಪತ್ನಿ ಹೆರಿಗೆ ನೋವಿನಿಂದ ಬಳಲಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋಗದ ಪತಿಯನ್ನು(Kerala Horror) ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯ ಮೇಲೆ ನರಹತ್ಯೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತ ಪತ್ನಿಯ ಶವವನ್ನು ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ನಲ್ಲಿರುವ ತನ್ನ ಮನೆಗೆ ಕೊಂಡೊಯ್ದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಪತಿ ಸಿರಾಜುದ್ದೀನ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೆರಿಗೆಯ ಸಮಯದಲ್ಲಿ ಪತಿಯನ್ನು ಹೊರತುಪಡಿಸಿ ಯಾರೆಲ್ಲಾ ಇದ್ದರು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತಪಟ್ಟ ಮಹಿಳೆಯ ಪತಿ ಆಕೆಯ ಹೆರಿಗೆಯನ್ನು ಮನೆಯಲ್ಲೇ ಮಾಡಿಸುವಂತೆ ಒತ್ತಯಿಸಿದ್ದ ಎನ್ನಲಾಗಿದೆ. ಇದು ಸಂತ್ರಸ್ತೆಯ ಐದನೇ ಗರ್ಭಧಾರಣೆಯಾಗಿದ್ದು, ಮೊದಲ ಎರಡು ಹೆರಿಗೆಗಳು ಆಸ್ಪತ್ರೆಗಳಲ್ಲಿ ನಡೆದಿದ್ದು, ಕೊನೆಯ ಹೆರಿಗೆ ಸೇರಿದಂತೆ ಉಳಿದ ಮೂರು ಹೆರಿಗೆಗಳು ಮನೆಯಲ್ಲಿಯೇ ನಡೆದಿವೆ ಎಂದು ಪೊಲೀಸರಗೆ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳು ಮಹಿಳೆಯ ಸಾವಿನ ಬಗ್ಗೆ ಎಲ್ಲರಿಂದ ಮುಚ್ಚಿಟ್ಟಿದ್ದರು ಎಂದು ತಿಳಿದು ಬಂದಿದೆ.
ಆಕೆಯ ಪತಿ ಆಲಪ್ಪುಳ ಮೂಲದವರಾಗಿದ್ದು, ಆತ ಯೂಟ್ಯೂಬ್ ಚಾನೆಲ್ ಹೊಂದಿದ್ದ ಹಾಗೂ ಧರ್ಮ ಪ್ರಚಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. 35 ವರ್ಷದ ಅಸ್ಮಾ ಎಂಬ ಮಹಿಳೆ ಏಪ್ರಿಲ್ 5 ರ ಸಂಜೆ ಮಗುವಿಗೆ ಜನ್ಮ ನೀಡಿದ್ದು, ಅದೇ ರಾತ್ರಿ ಅತಿಯಾದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆಕೆಯ ಶವವನ್ನು ರುಂಬವೂರಿಗೆ ತೆಗೆದುಕೊಂಡು ಹೋದರು ಎನ್ನಲಾಗಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಇದನ್ನು “ಉದ್ದೇಶಪೂರ್ವಕ ಕೊಲೆ”ಗೆ ಸಮಾನ ಎಂದು ಹೇಳಿದ್ದಾರೆ.
ಕೇರಳವು ಅತ್ಯಂತ ಕಡಿಮೆ ತಾಯಂದಿರ ಮತ್ತು ಶಿಶು ಮರಣ ಪ್ರಮಾಣವನ್ನು ಹೊಂದಿರುವ ರಾಜ್ಯವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೆಲವು ನಕಾರಾತ್ಮಕ ಪ್ರವೃತ್ತಿಗಳು ಹೊರಹೊಮ್ಮಿವೆ, ಇದು ತೀವ್ರ ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
