ವಿಮಾನದಲ್ಲಿ ಬಾಂಬ್ ಬೆದರಿಕೆ: ಭಾರಿ ಶೋಧ ಕಾರ್ಯಾಚರಣೆ

ಅಹಮದಾಬಾದ್ : ಅಹಮದಾಬಾದ್ನಿಂದ ಪಾಟ್ನಾಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಆ ಬಳಿಕ ವಿಮಾನವನ್ನು ಸಂಪೂರ್ಣ ಭದ್ರತಾ ಪರಿಶೀಲನೆಗಾಗಿ ನಿಲ್ದಾಣದ ಐಸೊಲೇಷನ್ ಬೇಯಲ್ಲಿ ನಿಲ್ಲಿಸಲಾಗಿದೆ ಮತ್ತು ವಿಮಾನದಲ್ಲಿದ್ದ ಎಲ್ಲಾ 192 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ವಿಮಾನ ಪಾಟ್ನಾದಲ್ಲಿ ಲ್ಯಾಂಡ್ ಆದ ಬಳಿಕ ಇಂಡಿಗೋ ನಿಲ್ದಾಣ ವ್ಯವಸ್ಥಾಪಕಿ ಶಾಲಿನಿ ಅವರ ಸೆಲ್ಫೋನ್ಗೆ ವಾಟ್ಸಾಪ್ ಸಂದೇಶದ ಮೂಲಕ ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಆಡಳಿತ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಭಾಗವಾಗಿ ವಿಮಾನ ನಿಲ್ದಾಣ, ಭದ್ರತೆ, ಜಿಲ್ಲಾಡಳಿತ ಮತ್ತು ಪೊಲೀಸ್ ಸೇರಿದಂತೆ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.