ಬೆಳ್ತಂಗಡಿ: ದಿನಸಿ ಅಂಗಡಿಯೊಳಗೆ ನುಸುಳಿದ 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ; ಉರಗ ಮಿತ್ರನಿಂದ ಸುರಕ್ಷಿತ ಸೆರೆ!

ಬೆಳ್ತಂಗಡಿ : ಮಿತ್ತಬಾಗಿಲು ಗ್ರಾಮದ ಕಕ್ಕೆನೇಜಿ ಎಂಬಲ್ಲಿ ದಿನಸಿ ಅಂಗಡಿಯೊಂದರ ಒಳಗಡೆ ಪ್ರತ್ಯಕ್ಷವಾಗಿದ್ದ 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟ ಘಟನೆ ಬುಧವಾರ (ಆಗಸ್ಟ್ 19) ನಡೆದಿದೆ.ಕಕ್ಕೆನೇಜಿ ನಿವಾಸಿ ವಾಸುದೇವ ರಾವ್ ಅವರ ದಿನಸಿ ಅಂಗಡಿಗೆ ಮಧ್ಯಾಹ್ನದ ವೇಳೆಗೆ ಏಕಾಏಕಿ ಕಾಳಿಂಗ ಸರ್ಪವೊಂದು ತೂರಿಕೊಂಡಿತ್ತು. ಬೃಹತ್ ಹಾವು ಕಂಡು ಅಂಗಡಿಯವರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದರು. ತಕ್ಷಣವೇ ಲಾಯಿಲದ ಪ್ರಸಿದ್ಧ ಉರಗ ಮಿತ್ರ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್ ಅವರು ಅತ್ಯಂತ ಸಮಯೋಚಿತವಾಗಿ ಹಾಗೂ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಸೆರೆಹಿಡಿದು, ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಡವಿ ಪ್ರದೇಶಕ್ಕೆ ಬಿಟ್ಟಿದ್ದಾರೆ.
