ಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆದರೆ ನಿಮ್ಮ ಮನೆ ಮುಂದೆ ತ್ಯಾಜ್ಯ ಸುರಿದು ತಮಟೆ ಹೊಡೆಯಲಿದ್ದಾರೆ!

ಬೆಂಗಳೂರು: ಸಿಲಿಕಾನ್ ಸಿಟಿಯ ಮಂದಿ ಇನ್ನು ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯ(waste Garbage) ಕಸ ಬಿಸಾಕಿದರೆ ಅಂತವರ ಮನೆಯ ಮುಂದೆ ತ್ಯಾಜ್ಯ ಸುರಿದು ತಮಟೆ ಹೊಡೆಯುವ ವಿನೂತನ ಅಭಿಯಾನ (waste management campaign) ಕೈಗೊಳ್ಳಲಾಗುವುದು ಎಂದು ಬೆಂಗಳೂರು( Banglore) ಘನತ್ಯಾಜ ನಿರ್ವಹಣೆ ನಿಯಮಿತ ಸಿದ್ಧತೆ ನಡೆಸಿದೆ.

ಅಲ್ಲಲ್ಲಿ ಕಸ.. ಮನೆ ಮುಂದೆ ತಮಟೆ ಸೌಂಡ್ !
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ರಸ್ತೆಗಳಲ್ಲಿ ಬ್ಲ್ಯಾಕ್ ಸ್ಪಾಟ್ ಗಳು ಇಲ್ಲದಂತೆ ಮಾಡಲು ಈ ಹಿಂದೆಯಿಂದಲೂ ಹಲವಾರು ಪ್ರಯತ್ನಗಳನ್ನು ಮಾಡಿದರೂ ಸಹ ಯಾವುದೇ ರೀತಿಯಾದಂತಹ ಬದಲಾವಣೆ ಕಂಡಿಲ್ಲ, ಎಷ್ಟು ಹೇಳಿದರೂ ಅಲ್ಲಲ್ಲಿ ಕಸದ ರಾಶಿ ತುಂಬಿರುವುದು ಕಂಡು ಬರುತ್ತಲೇ ಇವೆ. ಹೀಗಾಗಿ ಯಾರು ಕಸವನ್ನು ರಸ್ತೆ ಬದಿ ಬಿಸಾಕುತ್ತಾರೋ ಅಂತ ಮನೆಯನ್ನು ಗುರುತಿಸಿ ಅವರ ಮನೆಯ ಮುಂದೆಯೇ ಸುರಿದು, ತಮಟೆ ಹೊಡೆಯುವ ಮೂಲಕ ವಿಭಿನ್ನವಾದ ಅರಿವು ಮೂಡಿಸುವ ಕೆಲಸಕ್ಕೆ ಚಿಂತಿಸಲಾಗಿದೆ.
ಸೆಪ್ಟೆಂಬರ್ ಅಂತ್ಯದಿಂದ ಅಭಿಯಾನ ಶುರು!
198 ವಾರ್ಡ್ ಗಳಲ್ಲಿ ಬ್ಲ್ಯಾಕ್ ಸ್ಪಾಟ್ ಗಳಿರುವ ಬಗ್ಗೆ ಈಗಾಗಲೇ ಪೌರಕಾರ್ಮಿಕರು ಹಾಗೂ ತ್ಯಾಜ್ಯ ಸಂಗ್ರಹಿಸುವ ಆಟೋ ಸಿಬ್ಬಂದಿಗೆ ಮಾಹಿತಿಯಿದೆ. ಹೀಗಾಗಿ ಅವರಿಂದ ವೀಡಿಯೋ, ವಿಳಾಸಗಳನ್ನು ಅಧರಿಸಿ ಕಸ ಎಸೆಯುವವರ ಮಾಹಿತಿಗಳನ್ನು ಪತ್ತೆ ಹಚ್ಚಲಾಗುವುದು ಎನ್ನಲಾಗಿದೆ. ಈ ಅಭಿಯಾನವನ್ನು ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಆರಂಭಿಸುವ ಯೋಚನೆಯಿದೆ.
ದಂಡ ಕಟ್ಟಿಲ್ಲ ಅಂದ್ರೆ…ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ಪೋಸ್ಟ್ !
ರಸ್ತೆ, ನಿವೇಶನಗಳಲ್ಲಿ ಕಸ ಎಸೆಯುವವರಿಗೆ ಕನಿಷ್ಠ 2 ಸಾವಿರ ರೂ ದಂಡ ವಿಧಿಸಲಾಗುತ್ತಿದೆ, ಇದರ ಜೊತೆಗೆ ದಂಡ ಪಾವತಿಸದೇ ಇದ್ದವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಲು ನಿರ್ಧಾರ ಮಾಡಲಾಗಿದೆ. ಮತ್ತೆ ಎಂದೂ ಈ ರೀತಿಯಾದಂತಹ ತಪ್ಪನ್ನು ಮಾಡಬಾರದು ಎಂಬ ದೃಷ್ಟಿಯಿಂದ ಈ ರೀತಿಯಾಗಿ ಪೋಸ್ಟ್ ಮಾಡಲಾಗುತ್ತದೆ.
ಮುಜುಗರ ಉಂಟುಮಾಡೋ ಉದ್ದೇಶ ಅಲ್ಲ; ಕರೀಗೌಡ
ಇನ್ನು ಅಲ್ಲಲ್ಲಿ ತ್ಯಾಜ್ಯ ಎಸೆಯುವವರ ಬಗ್ಗೆ ಮಾರ್ಷಲ್ ಗಳು ಸೇರಿದಂತೆ ನಮ್ಮ ಸಿಬ್ಬಂದಿಗಳು ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಈಗಾಗಲೇ ಹಲವಾರು ಜನರ ಮಾಹಿತಿಯಿದೆ. ಅಂತವರ ಮನೆಯ ಮುಂದೆ ತಮಟೆ ಹೊಡೆಯಲಾಗುತ್ತದೆ. ಇವೆಲ್ಲ ಮನಗಂಡು ಜನತೆ ಸ್ವಚ್ಛತೆಯ ಬಗ್ಗೆ ಒತ್ತು ಕೊಡಬೇಕು. ಸುತ್ತಮುತ್ತಲಿನ ವಾತಾವರಣ ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು. ಇದು ಸಾರ್ವಜನಿಕರಿಗೆ ತೊಂದರೆ ಕೊಡುವ, ಇದರಿಂದ ಮುಜುಗರ ಉಂಟುಮಾಡುವ ಉದ್ದೇಶ ನಮಗಿಲ್ಲ ಎಂದು ಬಿಎಸ್ ಡಬ್ಲ್ಯೂಎಂಎಲ್ ನ ಸಿಇಒ ಕರೀಗೌಡ ತಿಳಿಸಿದ್ದಾರೆ.