ಚಿನ್ನ ಕಳ್ಳಸಾಗಣೆ ಪ್ರಕರಣ: ‘ನಾನು ಟ್ರ್ಯಾಪ್’ – ನಟಿ ರನ್ಯಾ ರಾವ್ ಹೇಳಿಕೆ, ತನಿಖೆಗೆ ಹೊಸ ತಿರುವು

ಬೆಂಗಳೂರು : ವಿದೇಶದಿಂದ ಚಿನ್ನ ಕಳ್ಳಸಾಗಣೆ ವೇಳೆ ಬಂಧಿತ ನಟಿ ರನ್ಯಾ ರಾವ್ ಪ್ರಕರಣ ಇದೀಗ ಮಹತ್ವದ ತಿರುವು ನೀಡಿದೆ. ‘ನಾನು ಟ್ರ್ಯಾಪ್ಗೊಳಗಾಗಿದ್ದೆ’ ಎಂದು ನಟಿ ರನ್ಯಾ ಹೇಳಿಕೆ ನೀಡಿದ್ದು, ಹೀಗಾಗಿ ‘ಟ್ರ್ಯಾಪ್’ನ ಹಿಂದಿರುವ ಹ್ಯಾಂಡ್ಲರ್ಗಳಿಗಾಗಿ ಇದೀಗ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್ಇ) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.

ಪ್ರಕರಣದಲ್ಲಿ ಬಂಧನ ಬಳಿಕ ವಿಶೇಷ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ವೇಳೆ ‘ನಾನು ಟ್ರ್ಯಾಪ್ಗೊಳಗಾಗಿದ್ದೇನೆ, ನನ್ನದೇನೂ ತಪ್ಪಿಲ್ಲ’ ರನ್ಯಾ ಅಲವತ್ತುಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿರುವ ಡಿಆರ್ಐ ಅಧಿಕಾರಿಗಳು, ನಟಿ ಸಂಪರ್ಕ ಜಾಲದ ಕುರಿತು ಶೋಧ ಆರಂಭಿಸಿದೆ.
ನಟಿ ರನ್ಯಾ ನಿಜಕ್ಕೂ ವಂಚಕರ ಜಾಲಕ್ಕೆ ಸಿಲುಕಿದ್ದಳೇ ಅಥವಾ ಹಣದಾಸೆಗೆ ಚಿನ್ನ ಕಳ್ಳ ಸಾಗಣೆಗೆ ಆಕೆಯೇ ಸಾಥ್ ನೀಡಿದ್ದಾಳೆಯೇ ಎಂಬುದು ತನಿಖೆ ನಂತರವಷ್ಟೇ ಸ್ಪಷ್ಟವಾಗಬೇಕಿದೆ. ಪ್ರಕರಣದಲ್ಲಿ ತಾನು ಮುಗ್ಧೆ ಎನ್ನುವಂತೆ ಆಕೆ ಬಿಂಬಿಸಲು ಪ್ರಯತ್ನಿಸುತ್ತಿರಲೂಬಹುದು. ಟ್ರ್ಯಾಪ್ ಎಂದಿರುವ ಕಾರಣಕ್ಕೆ ಆಕೆಯನ್ನು ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಡಿಆರ್ಇ ಮೂಲಕ ಕೋರ್ಟ್ಗೆ ಕೋರಲಾಗಿದೆ ಎಂದು ಮೂಲಗಳು ಹೇಳಿವೆ.
ರನ್ಯಾ ಮೊಬೈಲ್ ಜಾಲಾಡಿದ ಡಿಆರ್ಐ:
ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ರನ್ಯಾ ಮೊಬೈಲ್ ಹಾಗೂ ಲ್ಯಾಪ್ಟಾಪ್ ವಶಕ್ಕೆ ಪಡೆದು ಡಿಆರ್ಐ ಅಧಿಕಾರಿಗಳು ಜಾಲಾಡಿದ್ದಾರೆ. ನಟಿ ಜತೆ ನಿರಂತರ ಸಂಪರ್ಕದಲ್ಲಿದ್ದವರ ಪಟ್ಟಿ ತಯಾರಿಸಿದ್ದು, ಇದರಲ್ಲಿ ಚಿನ್ನ ಸಾಗಣೆ ಜಾಲದಲ್ಲಿ ಪಾತ್ರವಹಿಸಿದವರ ಕುರಿತು ಡಿಆರ್ಐ ಶೋಧ ನಡೆಸಿದೆ ಎಂದು ತಿಳಿದು ಬಂದಿದೆ