8 ವರ್ಷಗಳ ನಂತರ ಬಯಲಾಯಿತು ಸತ್ಯ : ಶಿಕ್ಷಕ ಜೊಮೊನ್ ನಿರಪರಾಧಿ ಎಂದು ಘೋಷಣೆ

ತಿರುವಂತಪುರv: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಒಂದು ತಿಂಗಳು ಜೈಲುಶಿಕ್ಷೆ ಅನುಭವಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 48 ವರ್ಷದ ಶಿಕ್ಷಕ ಸಿ.ಡಿ.ಜೊಮೊನ್ ಪಾಲಿಗೆ ‘ಶುಭ ಶುಕ್ರವಾರ’ ಜೀವನದಲ್ಲಿ ಹೊಸ ಬೆಳಕು ನೀಡಿದೆ. ದೂರು ದಾಖಲಿಸಿದ್ದ ವಿದ್ಯಾರ್ಥಿನಿಯೇ ಸಾರ್ವಜನಿಕವಾಗಿ ಸುಳ್ಳು ದೂರು ದಾಖಲಿಸಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡುವ ಪ್ರಕರಣ ಸುಖಾಂತ್ಯ ಕಂಡಿದೆ.
ಕೋಟಯಂನ ಕುರುಪ್ಪನ್ತರದಲ್ಲಿ ಜೊಮೊನ್ ಅವರು ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು. 2017ರಲ್ಲಿ ಇವರ ವಿರುದ್ಧ ಅದೇ ಸಂಸ್ಥೆಯ 21 ವರ್ಷದ ಕೊಚ್ಚಿ ಮೂಲದ ವಿದ್ಯಾರ್ಥಿನಿಯು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಳು. ಇದಾದ ಬಳಿಕ ಪೊಲೀಸರು ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು, ತಿಂಗಳ ಬಳಿಕ ಜಾಮೀನಿನ ಮೂಲಕ ಜೊಮೊನ್ ಹೊರಬಂದಿದ್ದರು.
ದೂರು ದಾಖಲಿಸಿದ್ದ ವಿದ್ಯಾರ್ಥಿನಿಯೇ ಎಂಟು ವರ್ಷದ ಬಳಿಕ ಸುಳ್ಳು ದೂರು ನೀಡಿದ್ದೇನೆ ತಪ್ಪೊಪ್ಪಿಕೊಂಡಿದ್ದಾಳೆ. ಜೊಮೊನ್ ಅವರ ವಿರೋಧಿಗಳ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದು, ಚರ್ಚ್ನಲ್ಲಿ ಸಾರ್ವಜನಿಕರ ಮುಂದೆಯೇ ಕ್ಷಮೆಕೋರಿದ್ದಾಳೆ.
‘ದೂರಿನ ಬಳಿಕ ನನ್ನ ಜೀವನವೇ ಛಿದ್ರಗೊಂಡಿತ್ತು, ಸಮಾಜದಿಂದಲೇ ಒಂಟಿತನ ಎದುರಿಸಿದ್ದೆ. ಹೆಂಡತಿ ಹೊರತುಪಡಿಸಿ, ನಾನು ಅಮಾಯಕ ಎಂದು ಯಾರೂ ನಂಬಿರಲಿಲ್ಲ. 8 ವರ್ಷಗಳ ಕಾಲ ನನ್ನ ಜೀವನವು ಹಾಳಾಯಿತು. ಯುವತಿಯ ತಪ್ಪೊಪಿಗೆಯು ಹೊಸ ಜೀವನ ನೀಡಲಿದೆ’ ಎಂದು ಜೊಮೊನ್ ತಿಳಿಸಿದ್ದಾರೆ.
ಆರೋಪ ಕೇಳಿಬಂದ ತಕ್ಷಣವೇ, 40 ವಿದ್ಯಾರ್ಥಿಗಳನ್ನು ಹೊಂದಿದ್ದ ಸಂಸ್ಥೆಯನ್ನು ಮುಚ್ಚಲಾಗಿತ್ತು. ನಂತರ ಸಾಂದರ್ಭಿಕ ಕೆಲಸ ಮಾಡಿಕೊಂಡು, ಹೆಂಡತಿ, ಮಕ್ಕಳನ್ನು ಸಾಕಿದ್ದರು. ಇವರ ಪರಿಸ್ಥಿತಿ ಗಮನಿಸಿದ್ದ ವಿದ್ಯಾರ್ಥಿನಿಯೇ ಕೆಲ ತಿಂಗಳ ಹಿಂದೆ ನ್ಯಾಯಾಲಯದಲ್ಲಿಯೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಇದಾದ ಬಳಿಕ ಪ್ರಕರಣ ಮುಕ್ತಾಯ ಕಂಡಿತ್ತು.
ಇತ್ತೀಚಿಗೆ ಶಿಕ್ಷಕರನ್ನು ಭೇಟಿಯಾಗಿ ಕ್ಷಮೆ ಕೋರಿದ್ದಳು. ಸುಳ್ಳು ಆರೋಪದಿಂದ ಸಮಾಜದಲ್ಲಿ ಸಾಕಷ್ಟು ಅವಮಾನಕ್ಕೆ ತುತ್ತಾಗಿದ್ದು, ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಶಿಕ್ಷಕರು ಸೂಚಿಸಿದ್ದರು. ಅದರಂತೆ, ಚರ್ಚ್ನಲ್ಲೇ ಸಾರ್ವಜನಿಕರ ಮುಂದೆಯೇ ಜೊಮನ್ ಕುಟುಂಬದ ಕ್ಷಮೆಯಾಚಿಸಿದ್ದಾಳೆ.
ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದ ವೇಳೆ,’ಜೀವನದಲ್ಲಿ ನಾನು ಸಾಕಷ್ಟು ನೊಂದಿದ್ದೇನೆ. ನನ್ನ ರೀತಿ ಯಾರೂ ನೋವು ಅನುಭವಿಸುವುದು ಬೇಡ’ ಎಂದು ತಿಳಿಸಿದ್ದಾರೆ.