‘ನಮಗೆ ಮದ್ಯದಂಗಡಿ ಬೇಕು’ ಎಂದು ಪಟ್ಟು ಹಿಡಿದ ಕೊತ್ತತ್ತಿ ಗ್ರಾಮಸ್ಥರು

ಮಂಡ್ಯ : ಸಾಮಾನ್ಯವಾಗಿ ತಮ್ಮ ಊರುಗಳಲ್ಲಿ ಯಾವುದೇ ರೀತಿಯ ಮದ್ಯದಂಗಡಿ ಇರಬಾರದು ಹೀಗಾಗಿ ತೆರವುಗೊಳಿಸಿ ಎಂದು ಹೋರಾಟ ಮಾಡುವ ಸುದ್ದಿಗಳನ್ನು ನಾವು ಓದಿರುತ್ತೇವೆ. ಆದರೆ ಇದೊಂದು ಅಪರೂಪದ ಸುದ್ದಿ ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದಿಂದ ಬಂದಿದೆ.
ಇಲ್ಲಿನವರು ತಮ್ಮ ಊರಿಗೆ ಮದ್ಯದಂಗಡಿ ಬೇಕೇ ಬೇಕೆಂದು ಅಬಕಾರಿ ಇಲಾಖೆ ಬಾಗಿಲು ತಟ್ಟಿ ಮನವಿ ಸಲ್ಲಿಸಿರುವುದು ಗಮನಸೆಳೆದಿದೆ.
ಇವತ್ತು ಮೇಲ್ನೋಟಕ್ಕೆ ಮದ್ಯದಂಗಡಿ ತಮ್ಮ ಊರಿನಲ್ಲಿರ ಬಾರದೆಂದು ಪ್ರತಿಭಟನೆ ನಡೆಸಿ ಹೇಳಿಕೆಗಳನ್ನು ನೀಡುವ ಜನರು ಒಂದೆಡೆಯಾದರೆ, ಮತ್ತೊಂದೆಡೆ ಮದ್ಯಕ್ಕಾಗಿ ಮತ್ತೊಂದು ಊರಿಗೆ ತೆರಳುವವರು, ತಮ್ಮದೇ ಊರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುವವರು, ಹೀಗೆ ಎಲ್ಲ ರೀತಿಯ ಜನರು ಕಾಣಸಿಗುತ್ತಾರೆ. ಹೀಗಾಗಿ ಅಕ್ರಮ ಮದ್ಯದ ಮಾರಾಟ ಮತ್ತು ಅದರ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಗುಟ್ಟಾಗಿಯೇನು ಉಳಿದಿಲ್ಲ. ತಮ್ಮ ಊರಿನಲ್ಲಿ ಮದ್ಯದ ಅಂಗಡಿ ತೆರೆದರೆ ಗಂಡಸರು ಅಲ್ಲಿಗೆ ಹೋಗಿ ಮದ್ಯ ಸೇವಿಸಿ ಹಣವನ್ನು ಅಲ್ಲಿಗೆ ಹಾಕಿ ಬರುತ್ತಾರೆಂಬ ಆತಂಕ ಪ್ರತಿ ಮನೆಯ ಮಹಿಳೆಯರನ್ನು ಕಾಡುತ್ತಿರುತ್ತದೆ. ಹೀಗಾಗಿ ಮದ್ಯದಂಗಡಿ ವಿರುದ್ಧ ಮಹಿಳೆಯರಿಗೆ ಆಕ್ರೋಶ ಇದ್ದೇ ಇರುತ್ತದೆ.
ಇನ್ನು ಮದ್ಯದಂಗಡಿ ತೆರೆದರೆ ಗ್ರಾಮದ ಸ್ವಾಸ್ಥ್ಯಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕವೂ ಇಲ್ಲದಿಲ್ಲ. ಕುಡುಕರ ಹಾವಳಿ ಹೆಚ್ಚಾಗುತ್ತದೆ. ಕುಡಿದು ನಶೆಯಲ್ಲಿರುವ ಕಾರಣ ಅಸಭ್ಯವಾಗಿ ವರ್ತಿಸುವುದರಿಂದ, ಮದ್ಯದಂಗಡಿ ಬಳಿ ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟವಾಗುತ್ತದೆ. ಊರಿನಲ್ಲಿ ಒಂದು ಮದ್ಯದಂಗಡಿ ತೆರೆದರೆ ಅಂಗಡಿ ಮಾಲೀಕ ಮತ್ತು ಸರ್ಕಾರಕ್ಕೆ ಆದಾಯ ಬರಬಹುದು ಆದರೆ ಅದರಿಂದ ಸಮಸ್ಯೆಗಳೇ ಜಾಸ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೆಲ್ಲವನ್ನು ಅರಿತ ಜನರು ತಮ್ಮ ಊರಿನಲ್ಲಿ ಮದ್ಯದಂಗಡಿ ಬೇಡವೆಂದು ವಿರೋಧಿಸುತ್ತಲೇ ಬರುತ್ತಿದ್ದಾರೆ.
ಜನ ವಿರೋಧ ಮಾಡಿದ ತಕ್ಷಣಕ್ಕೆ ಮದ್ಯದಂಗಡಿಯ ಸಂಖ್ಯೆ ಕಡಿಮೆಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇತ್ತೀಚೆಗೆ ಅದರಿಂದಲೇ ಹೆಚ್ಚು ಆದಾಯ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವುದರಿಂದ ಮತ್ತು ಎಷ್ಟೇ ಬೆಲೆ ಏರಿಕೆ ಮಾಡಿದರೂ ಕಣ್ಣುಮುಚ್ಚಿ ಕುಡಿಯುವುದರಿಂದ ಯಾವುದೇ ಸರ್ಕಾರ ಬಂದರೂ ಮದ್ಯದಂಗಡಿಯ ಸಂಖ್ಯೆಯನ್ನು ಹೆಚ್ಚು ಮಾಡುತ್ತಾರೆಯೇ ವಿನಃ ಕಡಿಮೆ ಮಾಡಿದ ಉದಾಹರಣೆಗಳಿಲ್ಲ. ಇದೆಲ್ಲದರ ಮಧ್ಯೆ ಕೊತ್ತತ್ತಿ ಗ್ರಾಮದ ಜನರು ನಮಗೆ ಮದ್ಯದಂಗಡಿ ಬೇಕೇ ಬೇಕು ಎಂದು ಮನವಿ ನೀಡಲು ಕಾರಣ ಕೂಡ ಕೊಟ್ಟಿದ್ದಾರೆ.
ಕೊತ್ತತ್ತಿ ಗ್ರಾಮದಲ್ಲಿ ಹೊಸದಾಗಿ ಬೋರ್ಡಿಂಗ್, ಲಾಡ್ಜಿಂಗ್, ರೆಸ್ಟೋರೆಂಟ್, ಮದ್ಯದಂಗಡಿ ಪ್ರಾರಂಭಿಸುವುದರಿಂದ ಹಲವು ರೀತಿಯ ಅನುಕೂಲವಾಗಲಿದ್ದು, ಹೀಗಾಗಿ ಬೇಕೇ ಬೇಕು ಎನ್ನುವುದು ಕೆಲವು ಮುಖಂಡರ ಅಭಿಪ್ರಾಯವಾಗಿದೆ. ಗ್ರಾಮದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಗ್ರಾಮ ಪಂಚಾಯಿತಿಯು ಪರವಾನಗಿ ಕೊಟ್ಟಿದೆ. ಎರಡು ಮೂರು ಬಾರಿ ಸಭೆ ನಡೆಸಿಯೂ ಒಪ್ಪಿಗೆ ಪಡೆಯಲಾಗಿದೆ. ಆದರೆ ಕೆಲವರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಮಗೆ ಮದ್ಯದಂಗಡಿ ಬೇಕೇ ಬೇಕೆಂದು ಒತ್ತಾಯಿಸಿ ಕೆಲವು ಮುಖಂಡರು ಮಂಡ್ಯ ನಗರದ ಅಬಕಾರಿ ಉಪಯುಕ್ತ ಡಾ.ಆರ್ ನಾಗಶಯನ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೋರ್ಡಿಂಗ್, ಲಾಡ್ಜಿಂಗ್, ರೆಸ್ಟೋರೆಂಟ್ಗೆ ಮನವಿ
ಇವರು ನಮ್ಮ ಊರಿಗೆ ಹೊಸದಾಗಿ ಬೋರ್ಡಿಂಗ್, ಲಾಡ್ಜಿಂಗ್, ರೆಸ್ಟೋರೆಂಟ್, ಮದ್ಯದಂಗಡಿ ಇದೆಲ್ಲ ಏಕೆ ಬೇಕು ಎಂಬುದಕ್ಕೂ ಸಮಜಾಯಿಷಿ ನೀಡಿದ್ದಾರೆ. ಅದೇನೆಂದರೆ, ಗ್ರಾಮದಲ್ಲಿ ಬಾರ್ ಆರಂಭಿಸುತ್ತಿರುವ ಕುರಿತು ಈಗಾಗಲೇ ನಾಮಫಲಕ ಹಾಕಲಾಗಿದೆ. ಇದರಿಂದ ಸುತ್ತಮುತ್ತಲ ಗ್ರಾಮಗಳಾದ ಮೊತ್ತಹಳ್ಳಿ, ಸಂತೆಕಸಲಗೆರೆ, ಬೇವಿನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಬಾರ್, ಬೋರ್ಡಿಂಗ್, ಲಾಡ್ಜಿಂಗ್, ರೆಸ್ಟೋರೆಂಟ್ ತೆರೆಯುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಹಾಗಾಗಿ ಇವೆಲ್ಲದಕ್ಕೂ ಅನುಕೂಲ ಮಾಡಿಕೊಡಬೇಕು ಎನ್ನುವುದು ಒತ್ತಾಯವಾಗಿದೆ.