ಮಂಗಳೂರು: ಮಕ್ಕಳ ಫುಟ್ಬಾಲ್ ತರಲು ನದಿಗೆ ಇಳಿದ ಯುವಕ ನೀರುಪಾಲು; ಕಸಬಾ ಬೆಂಗ್ರೆ ಬಳಿ ಶೋಚನೀಯ ಅಂತ್ಯ!

ಮಂಗಳೂರು: ಮಕ್ಕಳಿಗಾಗಿ ನದಿಗೆ ಬಿದ್ದಿದ್ದ ಫುಟ್ಬಾಲ್ನ್ನು ತರಲು ನದಿಗೆ ಇಳಿದ 25 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆಗಸ್ಟ್ 23ರಂದು ಕಸಬಾ ಬೆಂಗ್ರೆ ಫೆರಿ ಪಾಯಿಂಟ್ ಬಳಿ ನಡೆದಿದೆ.

ಮೃತ ಯುವಕನನ್ನು ಮೊಹಮ್ಮದ್ ಸನಾವುಲ್ಲಾ (25) ಎಂದು ಗುರುತಿಸಲಾಗಿದೆ.ಕಸಬಾ ಬೆಂಗ್ರೆ ಫೆರಿ ಪಾಯಿಂಟ್ ಸಮೀಪ ಮಕ್ಕಳು ಫುಟ್ಬಾಲ್ ಆಡುತ್ತಿದ್ದ ವೇಳೆ ಚೆಂಡು ಆಕಸ್ಮಿಕವಾಗಿ ಪಕ್ಕದಲ್ಲೇ ಹರಿಯುತ್ತಿದ್ದ ನದಿಗೆ ಬಿದ್ದಿತ್ತು. ಮಕ್ಕಳು ಚೆಂಡನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ, ಸನಾವುಲ್ಲಾ ಮಕ್ಕಳಿಗೆ ಸಹಾಯ ಮಾಡಲು ನದಿಗೆ ಇಳಿದು ಚೆಂಡನ್ನು ತರಲು ಮುಂದಾಗಿದ್ದರು.ಈ ವೇಳೆ ಅವರ ಕಾಲು ನದಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ತಕ್ಷಣ ಮೇಲೆ ಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಬಳಿಕ ಅವರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ.ಘಟನೆಯನ್ನು ಕಣ್ಣಾರೆ ಕಂಡ ಮಕ್ಕಳು ಹಾಗೂ ಸ್ಥಳೀಯರು ಕೂಡಲೇ ನೀರಿಗೆ ಇಳಿದು ಸನಾವುಲ್ಲಾ ಅವರನ್ನು ಹೊರತೆಗೆದಿದ್ದಾರೆ. ಬಳಿಕ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ತರುವಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.