ಚಿತ್ತೂರು: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದ ಪತಿಯ ಬರ್ಬರ ಕೊಲೆ; ಪತ್ನಿ ಸೇರಿ ಇಬ್ಬರ ಬಂಧನ!

ಚಿತ್ತೂರು (ಆಂಧ್ರಪ್ರದೇಶ): ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಅಮವಾಸ್ಯೆ ಪೂಜೆಯ ನೆಪದಲ್ಲಿ ದೇವಸ್ಥಾನಕ್ಕೆ ಕರೆದೊಯ್ದು ಪ್ರಿಯಕರ ಹಾಗೂ ಆತನ ಗ್ಯಾಂಗ್ ನೆರವಿನಿಂದ ಬರ್ಬರವಾಗಿ ಕೊಲೆ ಮಾಡಿಸಿರುವ ಘಟನೆ ಚಿತ್ತೂರು ಜಿಲ್ಲೆಯ ಗುಡುಪಲ್ಲೆ ಮಂಡಲದಲ್ಲಿ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಿಸಿಟಿವಿ ಹಾಗೂ ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಪೊಲೀಸರು ಹಂತಕಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಕುಪ್ಪಂ ಡಿಎಸ್ಪಿ ಪಾರ್ಥಸಾರಥಿ ಅವರು ನೀಡಿರುವ ಮಾಹಿತಿ ಪ್ರಕಾರ, ತಮಿಳುನಾಡಿನ ಸುಳಗಿರಿ ಸಮೀಪದ ದೇವಾಸನಪಲ್ಲೆ ನಿವಾಸಿ ರಮೇಶ್ ಕೊಲೆಯಾದ ದುರ್ದೈವಿ. ಇವರು ಹೊಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಎರಡು ವರ್ಷಗಳ ಹಿಂದೆ ಕುಪ್ಪಂ ಕ್ಷೇತ್ರದ ಬೋಯನಪಲ್ಲೆ ಮೂಲದ ಹಸಿನಿ ಎಂಬಾಕೆಯೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವೂ ಇತ್ತು. ಆದರೆ ಹಸಿನಿಗೆ ಮದುವೆಯ ಹೊರತಾಗಿಯೂ ಬೇರೊಬ್ಬ ಯುವಕನೊಂದಿಗೆ ವಿವಾಹೇತರ ಸಂಬಂಧವಿತ್ತು. ಇದನ್ನು ಪತಿ ರಮೇಶ್ ತೀವ್ರವಾಗಿ ವಿರೋಧಿಸುತ್ತಿದ್ದಿದ್ದೇ ಆತನ ಪ್ರಾಣಕ್ಕೆ ಕಂಟಕವಾಗಿದೆ.
ಯೋಜನೆಯ ಪ್ರಕಾರ, ಅಮವಾಸ್ಯೆಯ ದಿನ ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಹಸಿನಿ ತನ್ನ ಪತಿ ರಮೇಶ್ ಹಾಗೂ ಮಗಳೊಂದಿಗೆ ಬೈಕ್ನಲ್ಲಿ ಮಲ್ಲಪ್ಪ ಕೊಂಡ ದೇವಸ್ಥಾನಕ್ಕೆ ಹೊರಟಿದ್ದಾಳು. ಘಾಟ್ ರಸ್ತೆಯ 3ನೇ ತಿರುವಿನಲ್ಲಿ ಚಲಿಸುತ್ತಿದ್ದಾಗ ಹಸಿನಿ ತಂತ್ರ ಹೂಡಿ ತನ್ನ ಮೊಬೈಲ್ ಫೋನನ್ನು ಕೆಳಗೆ ಬೀಳಿಸಿದ್ದಾಳೆ. “ಫೋನ್ ಬಿದ್ದಿದೆ, ತಗೆದುಕೊಂಡು ಬಾ” ಎಂದು ಗಂಡನಿಗೆ ಹೇಳಿ ಬೈಕ್ ನಿಲ್ಲಿಸುವಂತೆ ಮಾಡಿದ್ದಾಳೆ. ರಮೇಶ್ ಬೈಕ್ ನಿಲ್ಲಿಸುತ್ತಿದ್ದಂತೆ, ಅಲ್ಲಿಗೇ ಮೊದಲೇ ಹೊಂಚು ಹಾಕಿ ಕಾಯುತ್ತಿದ್ದ ಹಸಿನಿಯ ಪ್ರಿಯಕರ ಹಾಗೂ ಇತರ ಇಬ್ಬರು ಯುವಕರು ರಮೇಶ್ನನ್ನು ಹಿಡಿದು ರಸ್ತೆ ಬದಿಯ ಪೊದೆಗಳಿಗೆ ಎಳೆದೊಯ್ದಿದ್ದಾರೆ. ಚಾಕುಗಳಿಂದ ಆತನ ದೇಹದಾದ್ಯಂತ ಕ್ರೂರವಾಗಿ ಇರಿದು ಕೊಲೆ ಮಾಡಿದ್ದಾರೆ.
ಕೃತ್ಯ ಎಸಗಿದ ಬಳಿಕ ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದು ಎಂಬ ದೃಷ್ಟಿಯಿಂದ ಹಂತಕರು ಕೊಲೆಗೆ ಬಳಸಿದ್ದ ಕೈಗವಸು (Gloves) ಹಾಗೂ ರಕ್ತಸಿಕ್ತ ಬಟ್ಟೆಗಳಿಗೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದರು. ಆದರೆ ಪೊಲೀಸರು ತಾಂತ್ರಿಕ ವಿಶ್ಲೇಷಣೆ, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಲೊಕೇಶನ್ ಕರಾರುವಾಕ್ಕಾಗಿ ಪರಿಶೀಲಿಸಿದಾಗ ಕೆಲವೇ ಗಂಟೆಗಳಲ್ಲಿ ಹಸಿನಿಯ ಪ್ಲಾನ್ ಬಯಲಾಗಿದೆ. ಪ್ರಸ್ತುತ ಪೊಲೀಸರು ಹಸಿನಿ ಮತ್ತು ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.