ಚೆನ್ನೈ: ತಮಿಳು ಚಿತ್ರರಂಗದ ದೃಶ್ಯ ಕಾವ್ಯದ ದ್ರೋಣಾಚಾರ್ಯ, ನಿರ್ದೇಶಕ ಭಾರತಿರಾಜ ಇನ್ನಿಲ್ಲ!

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ, ಪದಶ್ರೀ ಪ್ರಶಸ್ತಿ ಪುರಸ್ಕೃತ ಭಾರತಿರಾಜ ವಯೋಸಹಜ ಖಾಯಿಲೆಯಿಂದ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ 84 ವರ್ಷ ವಾಯಸ್ಸಾಗಿತ್ತು.
ಕಳೆದ ವರ್ಷ ಪುತ್ರ ಮನೋಜ್ ಅವರ ಹಠಾತ್ ನಿಧನದ ನಂತರ ಭಾರತಿರಾಜ ಅವರ ಆರೋಗ್ಯವು ದಿನೇ ದಿನೇ ಕ್ಷೀಣಿಸುತ್ತಿತ್ತು. ಇಂದು ಮುಂಜಾನೆ ಅವರು ನಿಧನರಾಗಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ನಟರಾದ ಶಿವಕುಮಾರ್, ಸೂರ್ಯ, ರಾಧಿಕಾ, ಹಿರಿಯ ಸಂಗೀತ ನಿರ್ದೇಶಕ ಇಳಯರಾಜ, ಸಾಹಿತಿ ವೈರಮುತ್ತು ಮತ್ತು ನಾಮ್ ತಮಿಳರ್ ಕಚ್ಚಿ ಪಕ್ಷದ ಮುಖ್ಯ ಸಂಯೋಜಕ ಸೀಮನ್ ಅವರು ಚೆನ್ನೈನ ಭಾರತಿರಾಜ ನಿವಾಸಕ್ಕೆ ಭೇಟಿ ನೀಡಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ‘ಎಕ್ಸ್ ಪೋಸ್ಟ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ, AMMK ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್, ತಮಿಳುನಾಡಿನ ಮಾಜಿ ಹಣಕಾಸು ಸಚಿವ ತಂಗಂ ತೇನ್ನರಸು, ನಟ ಶರತ್ ಕುಮಾರ್, ನಟಿ ಸಿಮ್ರಾನ್, ಖುಷ್ಟೂ ಸುಂದರ್, ನಿರ್ದೇಶಕ ಅರುಣ್ ಮಾಥೇಶ್ವರನ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಖ್ಯಾತ ನಟ, ನಿರ್ದೇಶಕರಾದ ಕೆ. ಭಾಗ್ಯರಾಜ್, ಆರ್. ಪಾರ್ಥಿಬನ್ ಮತ್ತು ಪಾಂಡ್ಯರಾಜನ್ ಅವರು ಭಾರತಿರಾಜ ಗರಡಿಯಿಂದಲೇ ಬೆಳೆದು ಬಂದವರು.
ತಮಿಳುನಾಡು ಸರ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ನಿರ್ದೇಶಕ ಭಾರತಿರಾಜ ಅವರ ಅಂತ್ಯಕ್ರಿಯೆ (State honours) ನಡೆಸಲಿವೆ ಎಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತಿಳಿಸಿದ್ದಾರೆ.
ಸ್ಟುಡಿಯೋ ಆಧಾರಿತ ಚಿತ್ರಗಳ ನಿರ್ಮಾಣವು ಚಿತ್ರರಂಗವನ್ನು ಆಳುತ್ತಿದ್ದ ಸಮಯದಲ್ಲಿ, ಅವರು ಹಳ್ಳಿಗಳು ಮತ್ತು ದೈನಂದಿನ ಜೀವನದಲ್ಲಿ ಬೇರೂರಿರುವ ಕಥೆಗಳನ್ನು ಹೇಳಲು ಆರಿಸಿಕೊಂಡರು. ಅವರ 1977 ರ ಕ್ಲಾಸಿಕ್ ಚಿತ್ರ ’16 ವಯದಿನಿಲೆ’ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ಈ ಚಿತ್ರವು ತಮಿಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟಿದೆ ಮತ್ತು ಕಥೆ ಹೇಳುವ ಹೊಸ ಶೈಲಿಗೆ ದಾರಿ ಮಾಡಿಕೊಟ್ಟಿತು. ಅವರ ಸುದೀರ್ಘ ವೃತ್ತಿಜೀವನದಲ್ಲಿ ‘ಮುದಲ್ ಮರಿಯಾ’ ಸೇರಿದಂತೆ ಹಲವು ಸ್ಮರಣೀಯ ಮತ್ತು ವಿಮರ್ಶಾತ್ಮಕವಾಗಿ ಪ್ರಶಂಸಿಸಲ್ಪಟ್ಟ ಚಿತ್ರಗಳನ್ನು ನೀಡಿದ್ದಾರೆ.
ಅವರು ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಫಿಲಂಫೇರ್ ದಕ್ಷಿಣ ಪ್ರಶಸ್ತಿ, ಒಂದು ಆಂಧ್ರಪ್ರದೇಶದ ನಂದಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ.