ಕೋಟ: ಉಪ್ಲಾಡಿ ಬಳಿ ಭೀಕರ ಹಿಟ್ ಅಂಡ್ ರನ್ ಅಪಘಾತ; ಬೈಕ್ ಸವಾರ ನಂದನ್ ಆಸ್ಪತ್ರೆಯಲ್ಲಿ ಸಾ*ವು!

ಕೋಟ : ಸಾಹೇಬ್ರಕಟ್ಟೆ-ಕೋಟ ಮೂರುಕೈ ರಸ್ತೆಯ ಉಪ್ಲಾಡಿ ತೆಂಕಬೆಟ್ಟು ಬಸ್ ನಿಲ್ದಾಣದ ಸಮೀಪ ಜೂನ್ 2ರ ಮಂಗಳವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್ಗೆ ಹಿಂದಿನಿಂದ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ನಂದನ್ ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಪೊಲೀಸ್ ದೂರಿನ ವಿವರಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 8:15 ರ ವೇಳೆಗೆ ಸವಾರ ನಂದನ್ ಅವರು ತಮ್ಮ ಮೋಟಾರ್ ಸೈಕಲ್ನಲ್ಲಿ ಕೋಟ ಮೂರುಕೈ–ಸಾಹೇಬ್ರಕಟ್ಟೆ ರಸ್ತೆಯಾಗಿ ಬನ್ನಾಡಿ ಕಡೆಗೆ ಪ್ರಯಾಣಿಸುತ್ತಿದ್ದರು. ಅವರು ಉಪ್ಲಾಡಿ ತೆಂಕಬೆಟ್ಟು ಬಸ್ ಸ್ಟ್ಯಾಂಡ್ ಬಳಿ ತಲುಪುತ್ತಿದ್ದಂತೆ, ಹಿಂದಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಅಪರಿಚಿತ ವಾಹನವೊಂದು ನಂದನ್ ಅವರ ಮೋಟಾರ್ ಸೈಕಲ್ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಭೀಕರ ರಭಸಕ್ಕೆ ನಂದನ್ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಅಪ್ಪಳಿಸಿದ್ದಾರೆ. ಪರಿಣಾಮವಾಗಿ ಅವರ ಹೊಟ್ಟೆಯ ಭಾಗಕ್ಕೆ ತೀವ್ರ ಸ್ವರೂಪದ ಆಂತರಿಕ ಗಾಯಗಳಾಗಿದ್ದು, ಸ್ಥಳದಲ್ಲೇ ಮಾತನಾಡಲಾಗದ ಸ್ಥಿತಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅತ್ಯಂತ ಅಮಾನವೀಯ ಸಂಗತಿಯೆಂದರೆ, ಅಪಘಾತ ಎಸಗಿದ ವಾಹನದ ಚಾಲಕ ಗಾಯಾಳುವನ್ನು ರಕ್ಷಿಸುವ ಗೋಜಿಗೆ ಹೋಗದೆ, ವಾಹನವನ್ನು ನಿಲ್ಲಿಸದೇ ಸ್ಥಳದಿಂದ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ನಂದನ್ ಅವರನ್ನು ತಕ್ಷಣವೇ ಮಣಿಪಾಲದ ಕೆ.ಎಂ.ಸಿ (KMC) ಆಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿತ್ತಾದರೂ, ಪರಿಸ್ಥಿತಿ ತೀವ್ರ ಹದಗೆಟ್ಟು ಮಂಗಳವಾರ ಸಂಜೆ 6:30 ರ ವೇಳೆಗೆ ನಂದನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಧೃಡೀಕರಿಸಿದ್ದಾರೆ.