ಬೆಂಗಳೂರು: ಇಂದು ಸಂಜೆ ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ; ಲೋಕಭವನದಲ್ಲಿ ಸಕಲ ಸಿದ್ಧತೆ!

ಬೆಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರು ಹಾಗೂ ಹೊಸದಾಗಿ ಸಂಪುಟ ಸಚಿವರು ಲೋಕಭವನದ ಗಾಜಿನ ಮನೆಯಲ್ಲಿ ಬುಧವಾರ(ಜೂ.3) ಸಂಜೆ 4:05ರ ಸುಮಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ನೂತನ ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಪ್ರತಿಜ್ಞಾವಿಧಿ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧನೆ ಮಾಡಿದ್ದಾರೆ. ಆ ಕಾರ್ಯಕ್ರಮ ಹಿನ್ನೆಲೆ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಲೋಕಭವನದ ಗಾಜಿನ ಮನೆಯ ವೇದಿಕೆ ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿ, ಭದ್ರತಾ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದರು. ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಉದ್ಯಮಿಗಳು ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪ್ರಮುಖ ಮುಖಂಡರು ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ.
ಅದೇ ರೀತಿ, ಎಲ್ಲ ಧರ್ಮದ ಧಾರ್ಮಿಕ ಮುಖಂಡರನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷೀ ಕರಿಸುವಂತೆ ಆಹ್ವಾನಿಸಲಾಗಿದೆ. ಕರ್ನಾಟಕ ಸರಕಾರದ ವತಿಯಿಂದ ವಿಐಪಿ ಆಹ್ವಾನ ಪತ್ರಿಕೆಗಳು ಸೇರಿದಂತೆ ಒಟ್ಟು ಮೂರು ರೀತಿಯ 2,200ಕ್ಕೂ ಹೆಚ್ಚು ಪ್ರವೇಶ ಪಾಸ್ ಗಳನ್ನು ವಿತರಿಸಲಾಗಿದೆ ಎಂದು ಗೊತ್ತಾಗಿದೆ. ಲೋಕಭವನದ ಒಳಗೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 500 ಮಂದಿ ಗಣ್ಯರಿಗೆ ಮಾತ್ರ ಪ್ರವೇಶದ ಪಾಸ್ ನೀಡಲಾಗಿದೆ.
ವಿಧಾನಸೌಧಕ್ಕೆ ಬಂದ ಜ್ಯೋತಿಷಿ: ಡಿ.ಕೆ.ಶಿವಕುಮಾರ್ ಅವರ ಜ್ಯೋತಿಷಿ ವಿ.ವಿ.ಆರಾಧ್ಯ ಗುರೂಜಿ ಅವರು ವಿಧಾನಸೌಧ
ಮುಖ್ಯಮಂತ್ರಿ ಕಚೇರಿಗೆ ಮಂಗಳವಾರ ಭೇಟಿ ನೀಡಿ ಸುಮಾರು ಅರ್ಧ ಗಂಟೆಗಳ ಕಾಲ ವಾಸ್ತು ಪರಿಶೀಲನೆ ನಡೆಸಿದರು. ಆಸನ ವ್ಯವಸ್ಥೆ ಸಿಎಂ ಕೊಠಡಿಯ ಉಪ ಕೋಣೆ, ಶೌಚಗೃಹ ಬಗ್ಗೆ ವಾಸ್ತು ಶಾಸ್ತ್ರಜ್ಞ ಪರಿಶೀಲಿಸಿದರು. ವಾಸ್ತು ಪರಿಶೀಲನೆಯ ವೇಳೆ ಕಚೇರಿಯ ಎರಡೂ ಬದಿಯ ದ್ವಾರವನ್ನು ಪೊಲೀಸರು ಮುಚ್ಚಿದ್ದ ದೃಶ್ಯ ಕಂಡಿತು.
ಈ ಕುರಿತು ಪ್ರತಿಕ್ರಿಯಿಸಿದ ಜ್ಯೋತಿಷಿ ವಿ.ವಿ.ಆರಾಧ್ಯ ಮುಖ್ಯಮಂತ್ರಿ ಅವರ ಕೊಠಡಿಯ ವಾಸ್ತು ಪ್ರಕಾರ ಬದಲಾವಣೆ ಮಾಡಲು ಹೇಳಿದ್ದೇನೆ ಎಂದು ತಿಳಿಸಿದರು.