ಟಿಎಂಸಿ ತೊರೆಯುವವರು ಹೊರಹೋಗಬಹುದು: ದೀದಿ ಖಡಕ್ ಸಂದೇಶ!

ಕೋಲ್ಕತ್ತಾ: ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಯಾರೆಲ್ಲ ತೊರೆಯಲು ಬಯಸುತ್ತಾರೊ, ಅವರೆಲ್ಲ ಹೊರ ಹೋಗಬಹುದು ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಅಭ್ಯರ್ಥಿಗಳು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಪುನರ್ ಸಂಘಟನೆಯತ್ತ ಗಮನ ನೀಡಬೇಕು ಎಂದು ಹೇಳಿದ್ದಾರೆ.
ಶುಕ್ರವಾರ ತಮ್ಮ ಕಾಲಿಘಾಟ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಟಿಎಂಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಪರಾಭವ ಅನುಭವಿಸಿರುವ ಹೊರತಾಗಿಯೂ ಮತ್ತೆ ಪುಟಿದೇಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಟಿಎಂಸಿ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡಾ ಭಾಗವಹಿಸಿದ್ದರು.

“ಯಾರೆಲ್ಲ ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೊ, ಅವರೆಲ್ಲ ಹೋಗಲಿ. ನಾನು ಮತ್ತೆ ಹೊಸದಾಗಿ ಪಕ್ಷವನ್ನು ಪುನರ್ ಸಂಘಟಿಸಲಿದ್ದೇನೆ. ಯಾರೆಲ್ಲ ಪಕ್ಷದಲ್ಲಿ ಉಳಿದಿದ್ದಾರೆ ಅವರು ಹಾನಿಗೀಡಾಗಿರುವ ಪಕ್ಷದ ಕಚೇರಿಗಳನ್ನು ಮರು ನಿರ್ಮಾಣ ಮಾಡಿ. ಅವುಗಳಿಗೆ ಬಣ್ಣ ಬಳಿದು ಮತ್ತೆ ತೆರೆಯಿರಿ ಎಂದು ಸೂಚಿಸುತ್ತಿದ್ದೇನೆ. ಅಗತ್ಯ ಬಿದ್ದರೆ, ನಾನೂ ಕೂಡಾ ಅವುಗಳಿಗೆ ಬಣ್ಣ ಬಳಿಯುತ್ತೇನೆ. ತೃಣಮೂಲ ಕಾಂಗ್ರೆಸ್ ಪಕ್ಷ ಎಂದಿಗೂ ತಲೆ ಬಾಗುವುದಿಲ್ಲ. ಜನಮತವನ್ನು ಲೂಟಿ ಮಾಡಲಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.