ಶೃಂಗೇರಿ ಕ್ಷೇತ್ರದ ಫಲಿತಾಂಶ ಬಿಜೆಪಿಗೆ ಬಿಗ್ ಶಾಕ್ ; ಬಿಜೆಪಿ ಏಜೆಂಟರಿಂದ ಸ್ಫೋಟಕ ಹೇಳಿಕೆ.

ಚಿಕ್ಕಮಗಳೂರು : ಶೃಂಗೇರಿ ವಿಧಾನಸಭೆ ಕ್ಷೇತ್ರದಲ್ಲಿ 2023ರಲ್ಲಿ ನಡೆದ ಚುನಾವಣೆಯ ಅಂಚೆ ಮತಗಳ ಮರು ಎಣಿಕೆಯಲ್ಲಿ ಶಾಸಕರಾಗಿದ್ದ ರಾಜೇಗೌಡ ಪರಾಭವಗೊಂಡು ಜೀವರಾಜ್ ಶಾಸಕರಾಗಿ ಆಯ್ಕೆಯಾಗಿರುವ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದ್ದು, ಅಂಚೆ ಮತಗಳನ್ನು ತಿರುಚಿ ಅಕ್ರಮ ಎಸಗಿರುವ ಆರೋಪದೊಂದಿಗೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಲ್ಲದೇ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದೆ.
ಅಂಚೆ ಮತಗಳ ಮರು ಎಣಿಕೆ ಸಂದರ್ಭ ಉಂಟಾಗಿರುವ ಗೊಂದಲ ಸಂಬಂಧ 2023ರಲ್ಲಿ ಬಿಜೆಪಿ ಅಭ್ಯರ್ಥಿಯ ಏಜೆಂಟ್ ಆಗಿ ಮತ ಎಣಿಕೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದ ಇಬ್ಬರು ಬಿಜೆಪಿ ಮುಖಂಡರು ಶುಕ್ರವಾರ ದೇವಾಲಯದ ಮುಂದೆ ಪ್ರಮಾಣ ಮಾಡಿ ಅಂದು ನಡೆದ ಮತ ಎಣಿಕೆ ಪಾರದರ್ಶಕವಾಗಿ ನಡೆದಿದ್ದು, ಯಾವುದೇ ಲೋಪ ಆಗಿಲ್ಲ ಎಂದಿದ್ದಾರೆ.2023ರಂದು ನಡೆದ ಶೃಂಗೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸಂದರ್ಭ ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಯಲ್ಲಿ ನ್ಯಾಯಾಲಯ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ಅದರಂತೆ ಮೇ 2ರಂದು ಅಂಚೆ ಮತಗಳ ಎಣಿಕೆ ನಡೆದಿದ್ದು, ಮತ ಎಣಿಕೆ ಪೂರ್ಣಗೊಂಡ ಬಳಿಕ ಜೀವರಾಜ್ 55 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರನ್ನು ಸೋಲಿಸುವ ಮೂಲಕ ಜೀವರಾಜ್ ಶಾಸಕರಾಗಿ ಆಯ್ಕೆಯಾಗಿದ್ದರು.
ಈ ಫಲಿತಾಂಶ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಸಂಚಲಕ್ಕೆ ಕಾರಣವಾಗಿದ್ದು, ಅಂಚೆ ಮತಗಳನ್ನು ತಿರುಚಲಾಗಿದ್ದು, ಸಿಂಧುವಾಗಿದ್ದ ಮತ ಪತ್ರಗಳು ಮರು ಮತ ಎಣಿಕೆ ಸಂದರ್ಭ ಅಸಿಂಧುವಾಗಿವೆ, ರಾಜೇಗೌಡ ಪರ ಸಿಂಧುವಾಗಿದ್ದ ಮತ ಪತ್ರಗಳಿಗೆ ಡಬಲ್ ರೈಟ್ ಮಾರ್ಕ್ ಹಾಕಿ ತಿರುಚಲಾಗಿದೆ, ಮತಪತ್ರಗಳಿದ್ದ ಬಾಕ್ಸ್ ಗಳ ಬೀಗ ಮೊದಲೇ ತೆರೆಯಲಾಗಿದ್ದು, ಮತ ಪತ್ರಗಳಿದ್ದ ಕವಳ ಸೀಲ್ ಒಡೆದಿತ್ತು ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿ ರಾಜೇಗೌಡ ದೂರಿದ್ದರು. ಈ ಸಂಬಂಧ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಅಭ್ಯರ್ಥಿ ರಾಜೇಗೌಡ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದ್ದರು.ಈ ಬೆಳವಣಿಗೆಗಳ ಬಳಿಕ ಶೃಂಗೇರಿ ಕ್ಷೇತ್ರದಲ್ಲಿ ಈ ಫಲಿತಾಂಶದ ಬಗ್ಗೆ ಭಾರೀ ಚರ್ಚೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಪರವಾಗಿ 2023ರಲ್ಲಿ ನಡೆದ ಮತ ಎಣಿಕೆ ವೇಳೆ ಚುನಾವಣಾ ಏಜೆಂಟ್ ಆಗಿದ್ದ ರಾಮಸ್ವಾಮಿ ಹಾಗೂ ಎಣಿಕೆ ಏಜೆಂಟ್ ಆಗಿದ್ದ ಅದ್ದಡ ಸತೀಶ್ ಎಂಬ ಬಿಜೆಪಿ ಮುಖಂಡರ ಮೇಲೆ ಸ್ಥಳೀಯವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಪಡೆದು ಅಂಚೆ ಮತಗಳ ಎಣಿಕೆ ಸಂದರ್ಭ ರಾಜೇಗೌಡ ಪರ ಕೆಲಸ ಮಾಡಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಹೊರಿಸಿದ್ದರು. ಇದು ಕ್ಷೇತ್ರದ ಜನರಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು.ಈ ಹಿನ್ನೆಲೆಯಲ್ಲಿ ಕೊಪ್ಪ ತಾಲೂಕಿನ ಪತ್ರಿಕಾ ಬಳಗದವರು ಈ ಇಬ್ಬರು ಚುನಾವಣಾ ಏಜೆಂಟರು ದೇವಾಲಯದ ಮುಂದೆ ಆಣೆ ಪ್ರಮಾಣ ಮಾಡಿ ಗೊಂದಲ ನಿವಾರಿಸಬೇಕೆಂದು ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಒಪ್ಪಿದ ಚುನಾವಣಾ ಏಜೆಂಟ್ ರಾಮಸ್ವಾಮಿ ಹಾಗೂ ಎಣಿಕೆ ಏಜೆಂಟ್ ಅದ್ದಡ ಸತೀಶ್, ಶುಕ್ರವಾರ ಕೊಪ್ಪ ತಾಲೂಕಿನ ವೀರಭದ್ರ ಸ್ವಾಮಿ ದೇವಾಲಯದ ಮುಂದೆ ಆಣೆ ಪ್ರಮಾಣ ಮಾಡಿ, 2023ರ ಚುನಾವಣೆಯ ಮತ ಎಣಿಕೆ ಪಾರದರ್ಶಕವಾಗಿ ನಡೆದಿದ್ದು, ಯಾವುದೇ ಲೋಪವಾಗಿಲ್ಲ. ತಾವು ರಾಜೇಗೌಡರಿಂದ ಹಣ ಪಡೆದು ಅವರ ಪರ ಕೆಲಸ ಮಾಡಿರುವ ಆರೋಪ ಸತ್ಯವಾಗಿದ್ದರೆ ಆ ದೇವರು ಯಾವುದೇ ಶಿಕ್ಷೆ ನೀಡಿದರೂ ಬದ್ದ ಎಂದು ಅವರು ದೇವಾಲಯದ ಮುಂದೆ ಆಣೆ ಪ್ರಮಾಣ ಮಾಡಿದ್ದಾರೆ.ಈ ಆಣೆ ಪ್ರಮಾಣ ಸದ್ಯ ಶೃಂಗೇರಿ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಏಜೆಂಟರೇ ಮತ ಎಣಿಕೆಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ, ಹಾಗಿದ್ದರೆ ಮರು ಮತ ಎಣಿಕೆ ವೇಳೆ ಸಿಂಧುವಾಗಿದ್ದ ಮತಪತ್ರಗಳು ಅಸಿಂಧು ಆಗಿದ್ದು ಹೇಗೆ? ಎಂಬ ಚರ್ಚೆ ಜಿಲ್ಲಾದ್ಯಂತ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ತನಿಖೆಯಿಂದ ಮಾತ್ರ ಸತ್ಯ ಹೊರಬರಬೇಕಿದೆ.
2023ರಲ್ಲಿ ನಡೆದ ಮತ ಎಣಕೆ ವೇಳೆ ತಾನು ಜೀವರಾಜ್ ಪರ ಎಣಿಕೆ ಏಜೆಂಟ್ ಆಗಿ ಮತ ಎಣಿಕೆಯನ್ನು ಪ್ರತ್ಯಕ್ಷ ವಾಗಿ ನೋಡಿದ್ದೇನೆ. ಎಣಿಕೆ ಸರಳವಾಗಿ, ಪಾರದರ್ಶಕವಾಗಿ ನಡೆದಿದೆ. ಮೇ 2ರ ಮರು ಮತ ಎಣಿಕೆ ವೇಳೆ ಫಲಿತಾಂಶ ಬದಲಾಗಿದೆ. ಇದರಿಂದಾಗಿ ಸದ್ಯ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ನಾನು ಕಾಂಗ್ರೆಸ್ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ, ದುಡ್ಡು ಪಡೆದಿದ್ದೇನೆ, ಅಂಚೆ ಮತಗಳ ಎಣಿಕೆ ಸಂದರ್ಭ ಲ್ಯಾಪ್ಸ್ ಆದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ಹಾಕಿದ್ದೇನೆ ಎಂದು ಆರೋಪಿಸಲಾಗಿತ್ತು. ನಾನು ಬಿಜೆಪಿಯ ಸಕ್ರೀಯ ಕಾರ್ಯಕರ್ತ, ಹಣಕ್ಕಾಗಿ ಕೆಲಸ ಮಾಡಿಲ್ಲ, ಯಾವ ಮೋಸವನ್ನೂ ಮಾಡಿಲ್ಲ. ಕೌಂಟಿಂಗ್ ಅತ್ಯಂತ ಪಾರದರ್ಶಕವಾಗಿ ನಡೆದಿದೆ.

- ಅದ್ದಡ ಸತೀಶ್