ಬಂಗಾಳದಲ್ಲಿ ಗೆದ್ದರೂ ರಾಜ್ಯಸಭೆಯಲ್ಲಿ ಬಿಜೆಪಿಗೆ ಸದ್ಯಕ್ಕಿಲ್ಲ ಲಾಭ: ಸಂಖ್ಯಾಬಲ ಹೆಚ್ಚಿಸಿಕೊಳ್ಳಲು 2029ರವರೆಗೆ ಕಾಯುವುದು ಅನಿವಾರ್ಯ

ಹೊಸದಿಲ್ಲಿ: ಬಿಜೆಪಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದರೂ ರಾಜ್ಯಸಭೆಯಲ್ಲಿ ಇದರ ಲಾಭ ಪಕ್ಷಕ್ಕೆ ದೊರಕಬೇಕಿದ್ದರೆ ಮುಂದಿನ ಲೋಕಸಭಾ ಚುನಾವಣೆವರೆಗೂ ಬಿಜೆಪಿ ಕಾಯಬೇಕಾಗುತ್ತದೆ. ಏಕೆಂದರೆ 2029ರ ಆಗಸ್ಟ್ ತಿಂಗಳಲ್ಲಷ್ಟೇ ರಾಜ್ಯದಿಂದ ಆಯ್ಕೆಯಾಗುವ ರಾಜ್ಯಸಭಾ ಸ್ಥಾನಗಳು ತೆರವುಗೊಳ್ಳುತ್ತವೆ.
ಅಂತೆಯೇ ತಮಿಳುನಾಡಿನಲ್ಲೂ ಇದರ ಪ್ರಯೋಜನಕ್ಕೆ ಎರಡು ವರ್ಷ ಕಾಯಬೇಕು. ಹೊಸ ರಾಜಕೀಯ ಪಕ್ಷ ಸಂಸತ್ತಿನ ಮೇಲ್ಮನೆಯಲ್ಲಿ ಪ್ರವೇಶ ಪಡೆಯಲು 2028 ಜೂನ್ ವರೆಗೂ ಕಾಯಬೇಕಾಯುತ್ತದೆ. ಟಿವಿಕೆಗೆ ಮೊಟ್ಟಮೊದಲ ಬಾರಿಗೆ ಮೂವರು ಪ್ರತಿನಿಧಿಗಳನ್ನು ರಾಜ್ಯಸಭೆಗೆ ಕಳುಹಿಸುವ ಅವಕಾಶವಿದೆ. ಡಿಎಂಕೆ, ಕಾಂಗ್ರೆಸ್ ಹಾಗೂ ಎಐಎಡಿಎಂಕೆ ತಲಾ ಒಂದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.
ಆದಾಗ್ಯೂ 2013ರ ಸೆಪ್ಟೆಂಬರ್ ವೇಳೆಗೆ ಒಟ್ಟು 773 ಇದ್ದ ಬಿಜೆಪಿಯ ಶಾಸಕ ಬಲ, 2026ರ ಮೇ ವೇಳೆಗೆ 1798ಕ್ಕೆ ಏರಿದ್ದು, ಮೇಲ್ಮನೆಯಲ್ಲಿ ಪಕ್ಷದ ಹೆಜ್ಜೆಗುರುತು ಹೆಚ್ಚುತ್ತಲೇ ಇದೆ. ಮುಂದಿನ ವರ್ಷ ಚುನಾವಣೆ ನಡೆಯುವ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್ ನಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿಸಿದರೆ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ಸಾಧ್ಯವಾಗಲಿದೆ.
ಇದಕ್ಕೆ ವಿರುದ್ಧವಾಗಿ ಮೇಲಿಂದ ಮೇಲೆ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷದ ಪ್ರಾತಿನಿಧ್ಯ ರಾಜ್ಯಸಭೆಯಲ್ಲಿ ಕುಸಿಯುತ್ತಿದ್ದು, ಪ್ರಸ್ತುತ ಕೇವಲ 29 ಮಂದಿ ರಾಜ್ಯಸಭೆ ಸದಸ್ಯರನ್ನು ಆ ಪಕ್ಷ ಹೊಂದಿದೆ. ಮುಂದಿನ ವರ್ಷ ಕೇರಳದಿಂದ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಎಡಪಕ್ಷಗಳಿಗೆ ದೊಡ್ಡ ಹೊಡೆತ ಬೀಳಲಿದ್ದರೂ, ಇದು ಕಾಂಗ್ರೆಸ್ ಗೆ ಲಾಭತಂದುಕೊಡುವುದರಿಂದ ಇಂಡಿಯಾ ಮೈತ್ರಿಕೂಟದಲ್ಲಿ ಬದಲಾವಣೆ ಆಗುವುದಿಲ್ಲ.
