ಸಂಕೇಶ್ವರ: ಮಗನನ್ನು ಉಳಿಸಲು ಹೋಗಿ ನದಿ ಪಾಲಾದ ತಾಯಿ; 96 ಗಂಟೆಗಳ ಬಳಿಕ ಪತ್ತೆಯಾಯಿತು ಬಾಲಕನ ಶವ

ಬೆಳಗಾವಿ: ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೋಗಿ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ. ಘಟನೆ ಸಂಭವಿಸಿದ ನಾಲ್ಕು ದಿನಗಳ ನಿರಂತರ ಶೋಧದ ನಂತರ ಬಾಲಕನ ಶವವು ಇಂದು ಪತ್ತೆಯಾಗಿದೆ.

ಪಟ್ಟಣದ ಹನುಮಾನ ನಗರದ ನಿವಾಸಿಗಳಾದ ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಅವರ ಪುತ್ರ ಸುಪ್ರೀತ (9) ಮೃತಪಟ್ಟ ದುರ್ದೈವಿಗಳು. ಕಳೆದ ನಾಲ್ಕು ದಿನಗಳ ಹಿಂದೆ ಲಕ್ಷ್ಮೀ ಅವರು ತಮ್ಮ ಮಗ ಸುಪ್ರೀತನೊಂದಿಗೆ ಸಂಕೇಶ್ವರದ ಶಂಕರಲಿಂಗ ಮಠದ ಹಿಂಭಾಗದ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ಮಗ ಸುಪ್ರೀತ ಅಚಾನಕ್ ಆಗಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗತೊಡಗಿದ್ದನು. ಇದನ್ನು ಕಂಡ ತಾಯಿ ಲಕ್ಷ್ಮೀ ಅವರು, ತನಗೆ ಈಜು ಬರದಿದ್ದರೂ ಮಗನನ್ನು ಬದುಕಿಸುವ ಹಠಕ್ಕೆ ಬಿದ್ದು ನದಿಗೆ ಜಿಗಿದಿದ್ದರು. ಆದರೆ, ನೀರಿನ ತೀವ್ರ ವೇಗ ಹಾಗೂ ಸೆಳೆತಕ್ಕೆ ಇಬ್ಬರೂ ಕೊಚ್ಚಿ ಹೋಗಿದ್ದರು.
ದುರಂತ ನಡೆದ ದಿನವೇ ಅಗ್ನಿಶಾಮಕ ದಳ ಮತ್ತು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ತಾಯಿ ಲಕ್ಷ್ಮೀ ಅವರ ಶವ ಪತ್ತೆಯಾಗಿತ್ತು. ಆದರೆ, ಬಾಲಕ ಸುಪ್ರೀತನ ಪತ್ತೆಗಾಗಿ ಕಳೆದ 96 ಗಂಟೆಗಳಿಂದ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದರು. ಇಂದು ಬೆಳಿಗ್ಗೆ ಘಟನಾ ಸ್ಥಳದಿಂದ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿ ಬಾಲಕನ ಶವವು ನದಿಯ ಪಾತ್ರದಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.