ಅಸ್ಸಾಂ ಚುನಾವಣೆ: ಮತಗಟ್ಟೆಯಲ್ಲಿ ಇವಿಎಂ ಧ್ವಂಸ, ಭಾರಿ ಹಿಂಸಾಚಾರ; 30 ಮಂದಿಗೆ ಗಾಯ, ಏಳು ಮಂದಿ ಬಂಧನ

ಗುವಾಹಟಿ: ಅಸ್ಸಾಂನಲ್ಲಿ ಗುರುವಾರ ಮತದಾನದ ಸಂದರ್ಭ ನಡೆದ ಹಿಂಸಾಚಾರದಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. 7 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಮಿ ಜಿಲ್ಲೆಯ ಪಥರಕಂಡಿಯಿಂದ ಸ್ಪರ್ಧಿಸಿರುವ ಕಾರ್ತಿಕ್ ಸೇನಾ ಸಿನ್ಹಾ ಅವರು ರಂಗಮತಿ ಮತಗಟ್ಟೆಗೆ ಪ್ರವೇಶಿಸಿ ಚುನಾವಣಾ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ನಿಜವಾದ ಮತದಾರರ ಹೆಸರಲ್ಲಿ ನಕಲಿ ಮತದಾರರು ಮತ ಚಲಾಯಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಚುನಾವಣಾ ಅಧಿಕಾರಿ ಈ ಆರೋಪವನ್ನು ನಿರಾಕರಿಸಿದಾಗ, ಅವರು ಇವಿಎಂಗಳನ್ನು ಮುರಿದು ಹಾಕಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು” ಎಂದು ಅವರು ಹೇಳಿದ್ದಾರೆ.
ಸಿನ್ಹಾ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಅಸ್ಸಾಂ ಸಚಿವ ಕೃಷ್ಣಂದು ಪೌಲ್ ಅವರೊಂದಿಗೆ ನೇರ ಸ್ಪರ್ಧೆಯಲ್ಲಿದ್ದಾರೆ.
“ಘರ್ಷಣೆಯಲ್ಲಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಚಿಕಿತ್ಸೆಗಾಗಿ ಕರೀಮ್ಗಂಜ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಭೂಮಿಯ ಹಿರಿಯ ಪೊಲೀಸ್ ಅಧೀಕ್ಷಕಿ ಲೀನಾ ಡೋಲೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಮತದಾನವನ್ನು ಮೂರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು. ಹಾನಿಗೀಡಾದ ಇವಿಎಂ ಬದಲಿಗೆ ಮತ್ತೊಂದು ಇವಿಎಂ ಅನ್ನು ಅಳವಡಿಸಿದ ಬಳಿಕ ಮತದಾನವನ್ನು ಮುಂದುವರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
