ಚಿಕ್ಕಮಗಳೂರು: ಪತಿ ಹೆಣದ ಜೊತೆ 10 ದಿನ ಕಳೆದ ಪತ್ನಿ; ಕೊಟ್ಟಿಗೆಹಾರದಲ್ಲಿ ನಡೆದ ಕರುಣಾಜನಕ ಘಟನೆ

ಚಿಕ್ಕಮಗಳೂರು: ಪತಿ ಮೃತಪಟ್ಟಿರುವುದರ ಅರಿವಿಲ್ಲದೆ ಕೊಳೆತ ಮೃತದೇಹದ ಜೊತೆ ಮಾನಸಿಕ ಅಸ್ವಸ್ಥೆಯಾಗಿರುವ ಪತ್ನಿ 10 ದಿನಗಳನ್ನು ಕಳೆದ ಕರುಣಾಜನಕ ಘಟನೆಯೊಂದು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿರುವುದು ವರದಿಯಾಗಿದೆ.
ಕೊಟ್ಟಿಗೆಹಾರದ ಬಣಕಲ್ ಎಂಬಲ್ಲಿ ಈ ಘಟನೆ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ.
77 ವರ್ಷದ ಸಿರಿಲ್ ಮೋನಿಸ್ ಎಂಬವರು ಅನಾರೋಗ್ಯದಿಂದ 10 ದಿನಗಳ ಹಿಂದೆ ಮನೆಯೊಳಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿರುವ ಅವರ ಹತ್ತಿ ಮಾನಸಿಕ ಅಸ್ವಸ್ಥರಾಗಿದ್ದು ಪತಿ ಮೃತಪಟ್ಟಿರುವುದು ಅವರಿಗೆ ಗೊತ್ತೇ ಆಗಿಲ್ಲ ಎನ್ನಲಾಗಿದೆ.

ಮನೆಯಿಂದ ವಿಪರೀತ ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಬುಧವಾರ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸಿರಿಲ್ ಮೋನಿಸ್ ಅವರ ಇಬ್ಬರು ಮಕ್ಕಳ ಪೈಕಿ ಪುತ್ರಿ ದುಬೈಯಲ್ಲಿ ಶಿಕ್ಷಕಿಯಾಗಿದ್ದರೆ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಮನೆಯಲ್ಲಿ ತಂದೆ ಮತ್ತು ತಾಯಿ ಮಾತ್ರ ವಾಸ್ತವ್ಯವಿದ್ದರು.
ಮಗ ದಿನಾಲೂ ತಾಯಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ತಂದೆಯ ಕುರಿತು ವಿಚಾರಿಸಿದಾಗ ಅಪ್ಪ ಚೆನ್ನಾಗಿದ್ದಾರೆ’ ಎಂದು ತಾಯಿ ಹೇಳುತ್ತಿದ್ದರು ಎಂದು ತಿಳಿದುಬಂದಿದೆ.
15 ದಿನಗಳ ಹಿಂದೆ ಊರಿಗೆ ಬಂದಿದ್ದ ಮಗ ನಾಲ್ಕು ದಿನ ಮನೆಯಲ್ಲಿ ಇದ್ದು ಹೋಗಿದ್ದ ಆ ಬಳಿಕ ತಂದೆ ಮೃತಪಟ್ಟಿದ್ದು ಅರಿವಿಗೆ ಬಾರದೆ ಈ ಘಟನೆ ಸಂಭವಿಸಿದೆ.
ಕೊಳೆತಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಸಮಾಜ ಸೇವಕ ಆರಿಫ್ ನೆರವಾಗಿದ್ದಾರೆ. ಸಂಜೆ ವೇಳೆ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.