“ಬಿಜೆಪಿ ಅಭ್ಯರ್ಥಿಯಿಂದ ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ: ಟಿಎಂಸಿಯಿಂದ ಚುನಾವಣಾ ಆಯೋಗಕ್ಕೆ ದೂರು”

ಕೊಲ್ಕತ್ತಾ: ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂತ್ರಸ್ತೆಯ ತಾಯಿ, ಬಿಜೆಪಿ ಅಭ್ಯರ್ಥಿ ನೀಡಿದ “ದೀದಿಯನ್ನು ಚರಂಡಿಗೆ ಎಸೆಯಿರಿ” ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದ ಸೃಷ್ಟಿಸಿದ್ದು ಈ ಹೇಳಿಕೆ ವಿರುದ್ಧ ಆಡಳಿತಾರೂಢ ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
“ನನ್ನ ಮಗಳ ಕೂದಲು ಹಿಡಿದು ಎಳೆದುಕೊಂಡು ಹೊಡೆದು ಹತ್ಯೆ ಮಾಡಿದಂತೆ, ನಾನು ಆಕೆಯ (ಸಿಎಂ) ಕೂದಲು ಹಿಡಿದು ತಿರುಗಿಸುತ್ತೇನೆ. ನಾನು ಸಿಎಂ ಅವರನ್ನು ಭೇಟಿಯಾದರೆ, ಆಕೆಯನ್ನು ಜೈಲಿಗೆ ಅಟ್ಟುತ್ತೇನೆ ಇಲ್ಲವೇ ಆಕೆಯನ್ನು ಕಸವಾಗಿ ಗಟಾರಕ್ಕೆ ಎಸೆಯುತ್ತೇನೆ” ಎಂದು ಪಾನಿಹಾತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಕೊಲ್ಕತ್ತಾ ಉಪನಗರ ಸೋದೆಪುರದಲ್ಲಿ ಶನಿವಾರ ಸಂಜೆ ನಡೆದ ಸಂವಾದಲ್ಲಿ ಬಿಜೆಪಿ ಅಭ್ಯರ್ಥಿ ಈ ಹೇಳಿಕೆ ನೀಡಿದ್ದಾರೆ ಎನಲಾಗಿದೆ.

ಇದಕ್ಕೂ ಮೊದಲು ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಜೆಪಿ ಅಭ್ಯರ್ಥಿ ಸಂತ್ರಸ್ತೆಯ ತಾಯಿ, “ಪ್ರಾಥಮಿಕವಾಗಿ ನನ್ನ ಹೋರಾಟ ಇರುವುದು ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ಪುತ್ರಿಯ ಸಾವಿಗೆ ಕಾರಣರಾದ ಸಿಎಂ ವಿರುದ್ಧ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನ್ನ ಪುತ್ರಿಯನ್ನು ಹತ್ಯೆ ಮಾಡಲಾಗಿದೆ’ ಎಂದು ಹೇಳಿದ್ದರು.
ಪಾನಿಹಾತಿ ಟಿಎಂಸಿ ಶಾಸಕ ನಿರ್ಮಲ್ ಘೋಷ್ ವಿರುದ್ಧ ಪುತ್ರಿಯ ಪ್ರಕರಣದಲ್ಲಿ ಸಾಕ್ಷ್ಯನಾಶಪಡಿಸಲು ಪ್ರಯತ್ನಿಸಿದ ಆರೋಪ ಹೊರಿಸಿದ ಅವರು, ಅಪರಾಧವನ್ನು ಮುಚ್ಚಿಹಾಕಲು ನಿರ್ಮಲ್ ಅವರ ಪುತ್ರ ಹಾಗೂ ಎದುರಾಳಿ ತೀರ್ಥಂಕರ್ ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂದು ಆಪಾದಿಸಿದರು. ಆದರೆ ಈ ವಿವಾದದ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹೇಳಿಕೆಯ ವಿರುದ್ಧ ಅಧಿಕೃತವಾಗಿ ದೂರು ನೀಡಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಅಭ್ಯರ್ಥಿಯ ಪತಿ ಹೇಳಿಕೆ ನೀಡಿದ್ದು, ಸಿಟ್ಟಿನ ಭರದಲ್ಲಿ ಆ ಕ್ಷಣ ಅಂಥ ಹೇಳಿಕೆ ನೀಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.