ಕಲಬುರಗಿ: ಮಹಾಲಕ್ಷ್ಮಿ ದೇವಸ್ಥಾನದ ಬೀಗ ಮುರಿದು ಕಳ್ಳತನ; ಚಿನ್ನಾಭರಣ, ಬೆಳ್ಳಿಯ ಮುಖವಾಡ ಕಳವು

ಕಲಬುರಗಿ: ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳನೋರ್ವ ಮೂರ್ತಿಯಲ್ಲಿದ್ದ ಆಭರಣಗಳನ್ನು ಕದ್ದೊಯ್ದ ಘಟನೆ ನಗರದ ಅಡ್ವಕೇಟ್ ಕಾಲೋನಿಯಲ್ಲಿ ಇರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿರುವ ಬಗ್ಗೆ ಮಂಗಳವಾರ ಬೆಳಕಿಗೆ ಬಂದಿದೆ.
ಎರಡು ಚಿನ್ನದ ತಾಳಿ ಹಾಗೂ ಮಹಾಲಕ್ಷ್ಮಿ ಮೂರ್ತಿಯ ಬೆಳ್ಳಿಯ ಮುಖವಾಡವನ್ನು ಕಳವು ಮಾಡಿರುವುದಾಗಿ ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕಳ್ಳತನದ ಸಂಪೂರ್ಣ ದೃಶ್ಯಗಳು ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನ ಪತ್ತೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
