ತಂಡದ ಜರ್ಸಿ ಧರಿಸಿ ಬಂದಿದ್ದ ಕಳ್ಳರ ಜಾಲ: ಪೊಲೀಸರ ವಿರುದ್ಧ ತಿರುಗಿಬಿದ್ದ ಆರ್ಸಿಬಿ ಅಭಿಮಾನಿಗಳು.

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಗಳಿಗೆ ಭಾರಿ ಶಾಕ್ ಎದುರಾಗಿದೆ. ಪಂದ್ಯದ ಸಂಭ್ರಮದಲ್ಲಿದ್ದ ಪ್ರೇಕ್ಷಕರ ಮೊಬೈಲ್ ಫೋನ್ಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಕಳ್ಳರ ತಂಡವೊಂದು ದೊಡ್ಡ ಮಟ್ಟದ ಕಳ್ಳತನ ಎಸಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅಂದರೆ ಎಕ್ಸ್ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಕ್ರೀಡಾಂಗಣದ P3 ಸ್ಟ್ಯಾಂಡ್ ಒಂದರಲ್ಲೇ ಸುಮಾರು 50 ರಿಂದ 60 ಮೊಬೈಲ್ ಫೋನ್ಗಳು ಕಳ್ಳತನವಾಗಿವೆ ಎಂದು ವರದಿಯಾಗಿದೆ. ಸಂತ್ರಸ್ತ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದು, “ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ನನ್ನ ಪತಿ ನೀರು ತರಲು ಹೋದಾಗ ಅವರ ಫೋನ್ ಕಳುವಾಗಿದೆ. ನಮ್ಮಂತೆ ಹತ್ತಾರು ಜನರು ಅದೇ ಸಮಯದಲ್ಲಿ ತಮ್ಮ ಫೋನ್ ಕಳೆದುಕೊಂಡು ಕಂಗಾಲಾಗಿದ್ದರು” ಎಂದು ತಿಳಿಸಿದ್ದಾರೆ.ಈ ಬಗ್ಗೆ ಕ್ರೀಡಾಂಗಣದಲ್ಲಿದ್ದ ಪೊಲೀಸರಿಗೆ ದೂರು ನೀಡಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿ ನೂರಾರು ಜನರು ಇದೇ ರೀತಿಯ ದೂರು ನೀಡಲು ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 10 ರಿಂದ 12 ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮಕ್ಕಳು ತಂಡದ ಜರ್ಸಿ ಧರಿಸಿ, ಕಾಂಪ್ಲಿಮೆಂಟರಿ ಟಿಕೆಟ್ ಹಿಡಿದು ಓಡಾಡುತ್ತಿದ್ದರು, ಇದು ದೊಡ್ಡ ಮಟ್ಟದ ಸಂಘಟಿತ ಜಾಲವಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.ಎರಡನೇ ಇನ್ನಿಂಗ್ಸ್ ಆರಂಭವಾದಾಗ ಪ್ರೇಕ್ಷಕರು ಆಹಾರ ಮತ್ತು ಪಾನೀಯಕ್ಕಾಗಿ ಸೀಟು ಬಿಟ್ಟು ಎದ್ದ ಸಂದರ್ಭವನ್ನು ಕಳ್ಳರು ಸರಿಯಾಗಿ ಬಳಸಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಭದ್ರತೆ ಇರುವ ಸ್ಟೇಡಿಯಂನಲ್ಲಿ ಇಂತಹ ಘಟನೆ ನಡೆದಿರುವುದು ಬೆಂಗಳೂರು ಪೊಲೀಸರ ಮತ್ತು ಕ್ರೀಡಾಂಗಣದ ಭದ್ರತಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
