ಸುರತ್ಕಲ್ ಕಳ್ಳತನ ಪ್ರಕರಣ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ

ಸುರತ್ಕಲ್ : ಹೊಸಬೆಟ್ಟು ಪರಿಸರದ ಗ್ಯಾರೇಜ್ ವೊಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕಳವು ಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಲತಃ ರಾಜಸ್ಥಾನದ ಜೋದ್ ಪುರ ನಿವಾಸಿ ಸದ್ಯ ಬೆಂಗಳೂರಿನ ಬನಶಂಕರಿ ಶ್ರೀನಿವಾಸ ನಗರ ನಿವಾಸಿ ಮುಖೇಶ್ ದಾಸ್ ( 46) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ಬಳಿಯಿದ್ದ 96 ಸಾವಿರ ರೂ. ಮೌಲ್ಯದ ವಾಹನಗಳ ಬಿಡಿಭಾಗಗಳು, ಕೃತ್ಯಕ್ಕೆ ಬಳಸಿದ್ದ 15 ಲಕ್ಷ ರೂ.ಮೌಲ್ಯದ ಈಚರ್ ಲಾರಿ ಸೇರಿದಂತೆ 15.96 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ವಿವರ: 2025ರ ಫೆ.14 ರಂದು ರಾತ್ರಿ ಲಾರಿವೊಂದರಲ್ಲಿ ಬಂದ ಚಾಲಕನೊಬ್ಬ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿರುವ ಫ್ರೆಂಡ್ಸ್ ಗ್ಯಾರೇಜ್ ನ ಬಳಿ ಲಾರಿಯನ್ನು ಪಾರ್ಕ್ ಮಾಡಿ ಗ್ಯಾರೇಜ್ ನಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ. ಈ ವೇಳೆ ಎರಡು ಘನ ವಾಹನದ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ತನ್ನ ಲಾರಿಯಲ್ಲಿ ಪರಾರಿಯಾಗಿದ್ದ. ಈ ಬಗ್ಗೆ ಗ್ಯಾರೇಜ್ ಮಾಲಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಬಂಧಿಸಿದ ಸುರತ್ಕಲ್ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ನ್ಯಾಯಾಲಯವು ಆತನಿಗೆ ನ್ಯಾಯಾಂಗಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.