ಪಾಕ್-ಅಫ್ಘಾನ್ ಮುಖಾಮುಖಿ: ಕಾಬೂಲ್ನಲ್ಲಿ ಸರಣಿ ಸ್ಫೋಟ

ಕಾಬೂಲ್: ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಸಂಘರ್ಷ ಸತತ ನಾಲ್ಕನೇ ದಿನಕವೂ ತೀವ್ರಗೊಂಡಿದ್ದು, ಅಫ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ರವಿವಾರ ಸ್ಫೋಟಗಳ ಸದ್ದು ಕೇಳಿಬಂದಿದೆ. ಕದನ ವಿರಾಮಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದ ಕರೆಗಳು ಫಲಕಾರಿಯಾಗದೆ, ಉತ್ತರ ಕಾಬೂಲ್ ನಲ್ಲಿ ಅಮೆರಿಕ ಸೈನಿಕ ನೆಲೆಯಾಗಿದ್ದ ಬಾಗ್ರಾಮ್ ವಾಯುನೆಲೆ ಮೇಲೆ ಪಾಕಿಸ್ತಾನ ನಡೆಸಿದ ದಾಳಿ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ ಎಂದು Aljazeera ವರದಿ ಮಾಡಿದೆ.
ಅಫ್ಘಾನ್ ವಾಯುಪ್ರದೇಶವನ್ನು ಮುಂಜಾನೆ ಪ್ರವೇಶಿಸಿದ ಪಾಕಿಸ್ತಾನಿ ಜೆಟ್ಗಳ ವಿರುದ್ಧ ತನ್ನ ಪಡೆಗಳು ವಿಮಾನ ವಿರೋಧಿ ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಿವೆ ಎಂದು ಕಾಬೂಲ್ ಆಡಳಿತ ತಿಳಿಸಿದೆ. ಬಾಗ್ರಾಮ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡ ದಾಳಿಯನ್ನು ತಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಇಸ್ಲಾಮಾಬಾದ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇದಕ್ಕೆ ಮಧ್ಯೆ ಇಸ್ಲಾಮಾಬಾದ್ ಮುಕ್ತ ಯುದ್ಧ ಘೋಷಣೆ ಮಾಡಿರುವುದಾಗಿ ವರದಿಯಾಗಿದೆ. ದಕ್ಷಿಣ ಬ್ ವಲಯದಲ್ಲಿ ಸುಮಾರು 32 ಚದರ ಕಿಲೋಮೀಟರ್ ಅಫ್ಘಾನ್ ಭೂಪ್ರದೇಶವನ್ನು ತನ್ನ ಪಡೆಗಳು ಹಿಡಿದಿಟ್ಟುಕೊಂಡಿವೆ ಎಂದು ಪಾಕಿಸ್ತಾನಿ ಭದ್ರತಾ ಮೂಲಗಳು ತಿಳಿಸಿವೆ. ಗುರುವಾರದಿಂದ ತೀವ್ರಗೊಂಡಿರುವ ದಾಳಿಗಳ ಪರಿಣಾಮವಾಗಿ ಹಲವು ಪ್ರಾಂತ್ಯಗಳಲ್ಲಿ 55 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಸರ್ಕಾರದ ಉಪ ವಕ್ತಾರ ಹಬ್ದುಲ್ಲಾ ಫಿತ್ರತ್ ತಿಳಿಸಿದ್ದಾರೆ.
ನಂಗರ್ಹಾರ್ ಪ್ರಾಂತ್ಯದಲ್ಲಿ ನಡೆದ ಡೋನ್ ದಾಳಿಯಲ್ಲಿ ಮಹಿಳೆ ಮತ್ತು ಮಗು ಸೇರಿದಂತೆ ನಾಗರಿಕರು ಮೃತಪಟ್ಟಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿ ದಾಳಿಯಿಂದ ಮನೆಗೆ ಹಾನಿಯಾದ ನಾಗರಿಕರೊರ್ವರು ಸಾವನ್ನಪ್ಪಿದ್ದಾರೆ.

ಕುನಾರ್ ಪ್ರಾಂತ್ಯದಲ್ಲಿ ಸಾಜಿದ್ ಎಂಬ ಯುವಕ, ಪಲಾಯನ ಮಾಡಲು ನಿರಾಕರಿಸಿದ, ತನ್ನ ಸಹೋದರ ಮಸೀದಿಯ ಸಮೀಪ ಸಾವನ್ನಪ್ಪಿದ ವಿಚಾರವನ್ನು ವಿದೇಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಲಿಬಾನ್ ಮಾತುಕತೆಗೆ ಸಿದ್ದ ಎಂದು ಸೂಚಿಸಿದರೂ, ಪಾಕಿಸ್ತಾನ ಅದನ್ನು ತಿರಸ್ಕರಿಸಿದೆ. ಪಾಕಿಸ್ತಾನದ ಪ್ರಧಾನಿಯ ವಿದೇಶಾಂಗ ಮಾಧ್ಯಮ ವಕ್ತಾರ ಮೊಶರಫ್ ಝದಿ, “ಯಾವುದೇ ಮಾತುಕತೆ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿ, ಅಫ್ಘಾನ್ ಭೂಮಿಯಿಂದ ನಡೆಯುತ್ತಿದೆ ಎಂದು ಪಾಕಿಸ್ತಾನ ಆರೋಪಿಸುವ ಭಯೋತ್ಪಾದನೆಗೆ ಅಂತ್ಯಗೊಳಿಸುವುದೇ ಇಸ್ಲಾಮಾಬಾದ್ ನ ಏಕೈಕ ಬೇಡಿಕೆ ಎಂದು ಹೇಳಿದ್ದಾರೆ.
ದೀರ್ಘಕಾಲದ ವಿವಾದ
ಸಂಘರ್ಷದ ಮೂಲದಲ್ಲಿ ಪಾಕಿಸ್ತಾನ ತಾಲಿಬಾನ್ (ಟಿಟಿಪಿ) ಕುರಿತ ವಿವಾದವಿದೆ. ಕಾಬೂಲ್ ಟಿಟಿಪಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ. ಕಳೆದ ವರ್ಷ ಪಾಕಿಸ್ತಾನದೊಳಗಿನ ಹಿಂಸಾಚಾರ ತೀವ್ರಗೊಂಡಿದ್ದು, 2024ರಿಂದ ಸಾವುಗಳು ಶೇಕಡಾ 75ರಷ್ಟು ಏರಿಕೆ ಕಂಡಿವೆ ಮತ್ತು ಒಟ್ಟಾರೆ ಹಿಂಸಾತ್ಮಕ ಘಟನೆಗಳು ಶೇಕಡಾ 29ರಷ್ಟು ಹೆಚ್ಚಾಗಿವೆ ಎಂದು ಇಸ್ಲಾಮಾಬಾದ್ ಮೂಲದ ಅಧ್ಯಯನ ವರದಿಗಳು ಸೂಚಿಸಿವೆ.
ಫೆಬ್ರವರಿ 21ರಂದು ಪಾಕಿಸ್ತಾನದ ವಾಯುದಾಳಿಗಳು ನಂಗರ್ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿನ ತಾಲಿಬಾನ್ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ದಾಳಿಗಳಲ್ಲಿ 13 ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂಬ ವಿಶ್ವಾಸಾರ್ಹ ವರದಿಗಳು ಲಭ್ಯವಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಕಾಬೂಲ್ ಈ ಕ್ರಮವನ್ನು “ಅಪ್ರಚೋದಿತ ದಾಳಿ” ಎಂದು ಖಂಡಿಸಿದೆ.
ಮಿಲಿಟರಿ ಬಲದಲ್ಲಿ ಪಾಕಿಸ್ತಾನವು ಯುದ್ಧವಿಮಾನಗಳು, ಟ್ಯಾಂಕ್ ಗಳು ಹಾಗೂ ಸುಧಾರಿತ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದೆ. ಆದರೆ ನ್ಯಾಟೋ ನೇತೃತ್ವದ ಪಡೆಗಳ ವಿರುದ್ಧ ದೀರ್ಘಕಾಲ ಹೋರಾಟ ನಡೆಸಿದ ಅನುಭವ ಹೊಂದಿರುವ ಅಫ್ಘಾನ್ ತಾಲಿಬಾನ್, ಅಗ್ಗದ ಮತ್ತು ಪರಿಣಾಮಕಾರಿ ಡೋನ್ಗಳನ್ನು ಬಳಸಿ ಪಾಕಿಸ್ತಾನಿ ಮಿಲಿಟರಿ ಶಿಬಿರಗಳ ಮೇಲೆ ದಾಳಿ ನಡೆಸುತ್ತಿರುವುದು ಗಮನಾರ್ಹವಾಗಿದೆ.
ಯುರೋಪಿಯನ್ ಒಕ್ಕೂಟ, ರಷ್ಯಾ, ಇರಾನ್, ಸೌದಿ ಅರೇಬಿಯಾ, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಜೋರ್ಡಾನ್ ಸೇರಿದಂತೆ ಹಲವು ರಾಷ್ಟ್ರಗಳು ಸಂಯಮ ಪಾಲಿಸಲು ಎರಡೂ ದೇಶಗಳಿಗೆ ಕರೆ ನೀಡಿವೆ. ಸಂಘರ್ಷ ವಿಸ್ತರಿಸಿದರೆ ‘ವಿಶಾಲ ಪ್ರಾದೇಶಿಕ ಅಸ್ಥಿರತೆ’ ಉಂಟಾಗುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ವಲಯ ಎಚ್ಚರಿಸಿದೆ.
ಈ ನಡುವೆ ಇರಾನ್ ಅನ್ನು ಒಳಗೊಂಡ ಅಮೆರಿಕ-ಇಸ್ರೇಲ್ ಸಂಘರ್ಷ ಜಾಗತಿಕ ರಾಜತಾಂತ್ರಿಕ ಗಮನ ಸೆಳೆಯುತ್ತಿರುವುದರಿಂದ, ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಈ ಸಂಘರ್ಷ ತುರ್ತು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಇಲ್ಲದೆ ಮುಂದುವರಿಯುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಅಫ್ಘಾನ್ ನ ಮಾಜಿ ರಾಜತಾಂತ್ರಿಕ ಉಮರ್ ಸಮದ್, ಮಧ್ಯಪ್ರಾಚ್ಯದ ಉದ್ವಿಗ್ನತೆ ಈ ಸಂಘರ್ಷದಿಂದ ಜಾಗತಿಕ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಹೇಳಿದ್ದಾರೆ.