ಹೃದಯಾಘಾತ ನಾಟಕವಾಡಿ ಪತಿಯ ಅಂತ್ಯಸಂಸ್ಕಾರ; ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ರಹಸ್ಯ!

ತುಮಕೂರು: ಜನವರಿ 30ರಂದು ಸಂಭವಿಸಿದ ಪರಮೇಶ್ ಎಂಬುವವರ ಸಾವು ಈಗ ಪೊಲೀಸ್ ತನಿಖೆಯ ಕೌತುಕಕ್ಕೆ ಕಾರಣವಾಗಿದೆ. ಮೊದಲಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ, ಪತಿ ಸತ್ತ ಕೇವಲ 20 ದಿನಕ್ಕೆ ಪತ್ನಿ ಮತ್ತೊಂದು ಮದುವೆಯಾಗಿರುವುದು ಈಗ ಅನುಮಾನಕ್ಕೆ ನಾಂದಿ ಹಾಡಿದೆ. ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿದ್ದ ಪರಮೇಶ್ ಮತ್ತು ಆಶಾ ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಪರಮೇಶ್ಗೆ ಆಶಾ ಎರಡನೇ ಹೆಂಡತಿಯಾಗಿದ್ದರೆ, ಆಶಾಗೆ ಪರಮೇಶ್ ಎರಡನೇ ಗಂಡನಾಗಿದ್ದರು.
ಕಳೆದ ಒಂದೂವರೆ ವರ್ಷದಿಂದ ಆಶಾ ಕ್ಯಾಟರಿಂಗ್ ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ದಂಪತಿಗಳ ನಡುವೆ ಜಗಳ ಶುರುವಾಗಿತ್ತು. ಆಶಾ ತನ್ನ ಪತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಳು ಎಂದು ಪರಮೇಶ್ ಸಹೋದರಿ ಆರೋಪಿಸಿದ್ದಾರೆ. ಜನವರಿ 30ರಂದು ಪರಮೇಶ್ ಮೃತಪಟ್ಟಾಗ, ಯಾವುದೇ ಪೊಲೀಸ್ ದೂರು ನೀಡದೆ ಅಂದೇ ಮಣ್ಣು ಮಾಡಲಾಗಿತ್ತು.
ಪತಿ ಸತ್ತು ತಿಂಗಳು ಕಳೆಯುವ ಮೊದಲೇ ಆಶಾ ಕ್ಯಾಟರಿಂಗ್ನಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು 3ನೇ ಮದುವೆಯಾಗಿದ್ದಾಳೆ.ಮೃತನ ಸಹೋದರಿ ಕೇವಲ ಆಶಾ ಮೇಲೆ ಮಾತ್ರವಲ್ಲದೆ, ಆಕೆಯ ಗೆಳತಿ ಮತ್ತು ಆಶಾ ಮದುವೆಯಾಗಿರುವ ಹೊಸ ವ್ಯಕ್ತಿಯ ಮೇಲೆಯೂ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.ಸಹೋದರಿಯ ದೂರಿನ ಮೇರೆಗೆ ಹೆಬ್ಬೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ದಾಸರಹಳ್ಳಿಯಲ್ಲಿ ಹೂತುಹಾಕಲಾಗಿದ್ದ ಪರಮೇಶ್ ಮೃತದೇಹವನ್ನು ಹೊರತೆಗೆಯಲಾಗಿದೆ. ಸ್ಥಳದಲ್ಲೇ ಎಫ್ಎಸ್ಎಲ್ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
