ಗದಗ : ದಲಿತರಿಗೆ ಕ್ಷೌರ ನಿರಾಕರಣೆ; ಗ್ರಾಮದಲ್ಲೇ ಸರ್ಕಾರಿ ಸಲೂನ್ ಆರಂಭಿಸಿದ ಆಡಳಿತ

ಗದಗ : ದಲಿತರಿಗೆ ಕ್ಷೌರ ಮಾಡಲು ಸವರ್ಣೀಯರು ನಿರಾಕರಿಸಿದ್ದಕ್ಕೆ ಸರಕಾರವೇ ಕ್ಷೌರದಂಗಡಿ(ಕಟಿಂಗ್ ಶಾಪ್ ಆರಂಭ ಮಾಡಿಸಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಅನೇಕ ವರ್ಷಗಳಿಂದ ದಲಿತರಿಗೆ ಕ್ಷೌರ ಮಾಡುತ್ತಿರಲಿಲ್ಲ ಎಂಬ ಆರೋಪವಿತ್ತು. ಈಗ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಶಿವಶರಣ ಹಡಪದ ಅಪ್ಪಣ್ಣ ಸಮಾಜ ವತಿಯಿಂದ ಕ್ಷೌರದಂಗಡಿ ಆರಂಭಿಸಲಾಗಿದೆ.
ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಲಕ ‘ಸಾಮರಸ್ಯ ಬದುಕು ಗ್ರಾಮದ ಬೆಳಕು’ ಕಾರ್ಯಕ್ರಮ ಮೂಲಕ ಕ್ಷೌರದಂಗಡಿ ತೆರೆಯಲಾಗಿದೆ.

ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಎಂಬ ವ್ಯಕ್ತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಂಗಡಿ ನೀಡಿ ಕ್ಷೌರ ಮಾಡಲು ಅನುವು ಮಾಡಿಕೊಡಲಾಗಿದೆ. ಇದರಿಂದ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕ್ಷೌರ ಮಾಡದಿರಲು ಕಾರಣ, ಗ್ರಾಮದ ಹಡಪದವರ ಮನೆಗೆ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಬರುತ್ತಿರುವುದರಿಂದ ಕ್ಷೌರ ಮಾಡುವುದನ್ನು ನಿಲ್ಲಿಸಿದ್ದರು. ಮೊದಲು ಸವರ್ಣೀಯರ ಕೆಲವರ ಮನೆ ಮನೆಗೆ ಹೋಗಿ ಕ್ಷೌರ ಮಾಡಿ ಬರುತ್ತಿದ್ದರು. ಈಗ ಅದು ನಿಂತು ಹೋಗಿತ್ತು. ಗ್ರಾಮದ ಜನರು ಅಕ್ಕ ಪಕ್ಕದ ಊರುಗಳಿಗೆ ತೆರಳಿ ಕ್ಷೌರ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಸ್ಥಳೀಯ ದಲಿತ ಸಮುದಾಯದವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸದ್ಯ ಅಧಿಕಾರಿಗಳ ನೇತೃತ್ವದಲ್ಲಿ ಕ್ಷೌರದಂಗಡಿ ಆರಂಭಿಸಲಾಗಿದೆ. ಈ ವೇಳೆ ಅನೇಕ ಅಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.