ಪೋಖ್ರಾನ್: ವಾಯುಪಡೆಯ ಭರ್ಜರಿ ಸಮರಾಭ್ಯಾಸ; ‘ವಾಯು ಶಕ್ತಿ’ ಮೂಲಕ ಶಕ್ತಿ ಪ್ರದರ್ಶನ

G ಜೈಸಲ್ವೇರ್ (ರಾಜಸ್ಥಾನ): ಭಾರತೀಯ ವಾಯುಪಡೆಯು ಶುಕ್ರವಾರ ಪೋಬ್ರಣ್ ಫೀಲ್ಡ್ ಫೈರಿಂಗ್ ರೇಂಜ್ ನಲ್ಲಿ ನಡೆದ ‘ವಾಯುಶಕ್ತಿ’ ಕವಾಯತಿನಲ್ಲಿ ತನ್ನ ಯುದ್ಧ ಸಾಮರ್ಥ್ಯ ಮತ್ತು ಶಸ್ತ್ರಬಲವನ್ನು ಪ್ರದರ್ಶಿಸಿತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ಅನುಕರಿತ ದಾಳಿಗಳ ಮೂಲಕ ‘ಆಪರೇಷನ್ ಸಿಂಧೂರ’ದಲ್ಲಿನ ತನ್ನ ಕಾರ್ಯಾಚರಣೆಗಳ ಝಲಕ್ಗಳನ್ನೂ ವಾಯುಪಡೆಯು ಪ್ರದರ್ಶಿಸಿತು.
ರಾಜಸ್ಥಾನದಲ್ಲಿ ಭಾರತ-ಪಾಕಿಸ್ತಾನ ಗಡಿ ಸಮೀಪದ ಥಾರ್ ಮರುಭೂಮಿಯಲ್ಲಿ ದಿನವಿಡೀ ನಡೆದ ಸಾಮರ್ಥ್ಯ ಪ್ರದರ್ಶನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವಾಯುಪಡೆಯ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಸಂಯೋಜಿತ ಕಾರ್ಯಾಚರಣೆ ನಡೆಸಿ ಮೂರು ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿದ್ದ ಗುರಿಗಳನ್ನು ಹೊಡೆದುರುಳಿಸಿದವು. ವೈಮಾನಿಕ ದಾಳಿ, ನಿಖರ ಬಾಂಬ್ ದಾಳಿ ಹಾಗೂ ಭೂಗುರಿಗಳ ಮೇಲಿನ ಸಂಯೋಜಿತ ದಾಳಿ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು.
ಕೃತಕವಾಗಿ ರೂಪಿಸಲಾಗಿದ್ದ ಗುರಿಗಳಲ್ಲಿ ಶತ್ರುದೇಶದ ರನ್ವೇ, ಪೆಟ್ರೋಲಿಯಂ ದಾಸ್ತಾನು ಸೌಲಭ್ಯ ಬಂಕರ್ಗಳು, ರಾಡಾರ್ ತಾಣಗಳು, ಟ್ಯಾಂಕ್ಗಳು ಹಾಗೂ ಶಸ್ತ್ರಸಜ್ಜಿತ ಬೆಂಗಾವಲು ವಾಹನಗಳು, ಸಂವಹನ ಕೇಂದ್ರ, ಭಯೋತ್ಪಾದಕ ಶಿಬಿರ, ಮದ್ದುಗುಂಡುಗಳ ಸಂಗ್ರಹಾಗಾರ, ವಾಯುನೆಲೆಯ ಹ್ಯಾಂಗರ್ ಹಾಗೂ ಕಮಾಂಡ್-ಆ್ಯಂಡ್-ಕಂಟ್ರೋಲ್ ಕೇಂದ್ರ ಸೇರಿದ್ದವು.

ಜಾಗ್ವಾರ್, ಮಿರಾಜ್ ಮತ್ತು ಸುಖೋಯ್ ಯುದ್ಧವಿಮಾನಗಳು ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದವು.
ಸ್ವದೇಶಿ ನಿರ್ಮಿತ ಎಚ್ಎಎಲ್ ನ ‘ಪ್ರಚಂಡ’ ಹೆಲಿಕಾಪ್ಟರ್ ಕೃತಕ ಮರುಇಂಧನ ಕೇಂದ್ರದ ಮೇಲೆ ದಾಳಿ ನಡೆಸಿ ತನ್ನ ಸಾಮರ್ಥ್ಯವನ್ನು ಮೆರೆಯಿತು. ಅಪಾಚೆ ದಾಳಿ ಹೆಲಿಕಾಪ್ಟರ್ಗಳು ಮತ್ತು ಎಂಐ-17 ವಿ5 ಹೆಲಿಕಾಪ್ಟರ್ಗಳೂ ಕವಾಯತಿನಲ್ಲಿ ಪಾಲ್ಗೊಂಡಿದ್ದವು.
ಬೆಳಿಗ್ಗೆ ಆಲಿವ್ ಹಸಿರು ಬಣ್ಣದ ಸಮವಸ್ತ್ರ ಮತ್ತು ಹೆಲ್ಕೆಟ್ ಧರಿಸಿದ್ದ ರಾಷ್ಟ್ರಪತಿಗಳು ಜೈಸಲ್ವೇರ್ ವಾಯುಪಡೆ ನಿಲ್ದಾಣದಿಂದ ‘ಪ್ರಚಂಡ’ ಹೆಲಿಕಾಪ್ಟರ್ ನಲ್ಲಿ ಸಹಪೈಲಟ್ ಆಗಿ 25 ನಿಮಿಷಗಳ ಹಾರಾಟ ನಡೆಸಿದರು.
‘ವಾಯುಶಕ್ತಿ’ ಕವಾಯತು ಭಾರತೀಯ ವಾಯುಪಡೆಯ ಯುದ್ಧ ಸನ್ನದ್ಧತೆಯನ್ನು ಪ್ರದರ್ಶಿಸುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದರಲ್ಲಿ ಆಧುನಿಕ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತದೆ.