ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡಿದ ಹಣ್ಣಿನ ವ್ಯಾಪಾರಿಗಳು:ಇಬ್ಬರ ಬಂಧನ.

ಇವತ್ತಿನ ದಿನಗಳಲ್ಲಿ ನಾವು ತಿನ್ನುವ ಪ್ರತಿಯೊಂದು ಆಹಾರವೂ ವಿಷಕಾರಿ ಎನಿಸಿದೆ. ಕೀಟಗಳಿಂದ ಹಣ್ಣು ತರಕಾರಿಗಳ ರಕ್ಷಣೆಗಾಗಿ ಬೆಳೆಗಾರರೇ ಸಾಕಷ್ಟು ಕೀಟನಾಶಕಗಳನ್ನು ಹಣ್ಣು ತರಕಾರಿಗಳಿಗೆ ಸಿಂಪಡನೆ ಮಾಡುತ್ತಾರೆ. ಇದರ ಜೊತೆಗೆ ಹಲವು ರಾಸಾಯನಿಕಗಳನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಇದು ಸಾಲದೆಂಬಂತೆ ಇಲ್ಲೊಬ್ಬ ಮಾರಾಟಕ್ಕಿಟ್ಟ ಹಣ್ಣುಗಳಿಗೆ ಇಲಿ ಪಾಶಾಣವನ್ನು ಸಿಂಪಡಣೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಮುಂಬೈನ ಮಲದ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿಗಳ ವಿರುದ್ಧ ಮಲದ್ನ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.


ಮಲದ್ ಪಶ್ಚಿಮದಲ್ಲಿನ ಹಣ್ಣಿನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ದೂರುದಾರರು ತೋರಿಸಿದ ವೀಡಿಯೋ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಸ್ಥಳದಲ್ಲಿ ರಾಟೆಲ್ ಎಂಬ ವಿಷಕಾರಿ ಇಲಿ ಪಾಶಾಣವನ್ನು ವಶಕ್ಕೆ ಪಡೆದಿದ್ದಾರೆ. ಇದು ಹಳದಿ ರಂಜಕದಂತಹ ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುವ ಮಾರಾಟಕ್ಕೆ ಲಭ್ಯವಿರುವ ಇಲಿ ಕೊಲ್ಲುವ ಉತ್ಪನ್ನವಾಗಿದೆ ಮಾರಾಟಗಾರರ ರಸ್ತೆಬದಿಯ ಅಂಗಡಿಯಿಂದ ಅದನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಅವರ ಹಣ್ಣಿನ ಅಂಗಡಿಯನ್ನು ಪೊಲೀಸರು ಸೀಲ್ ಮಾಡಿದ್ದಾರೆ.ಆರೋಪಿಗಳನ್ನು 42 ವರ್ಷದ ಮನೋಜ್ ಸಂಗಮ್ಲಾಲ್ ಕೇಸರ್ವಾನಿ (42) ಮತ್ತು 25 ವರ್ಷದ ರಾಹುಲ್ ಸದನ್ಲಾಲ್ ಕೇಸರ್ವಾನಿ ಎಂದು ಹೆಸರಿಸಲಾಗಿದೆ, ಇಬ್ಬರೂ ಮಲಾಡ್ ಪಶ್ಚಿಮದ ರಾಜನ್ಪದ ನಿವಾಸಿಗಳು. ಆರೋಪಿಗಳನ್ನು ಅದೇ ದಿನ ಬೊರಿವಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಆರೋಪಿಗಳು, ರಾತ್ರಿಯಿಡೀ ತಮ್ಮ ದಾಸ್ತಾನಿಗೆ ಹಾನಿಯಾಗದಂತೆ ಇಲಿಗಳನ್ನು ತಡೆಯಲು ಈ ವಸ್ತುವನ್ನು ಬಳಸಿದ್ದಾಗಿ ಮಾರಾಟಗಾರರು ಒಪ್ಪಿಕೊಂಡಿದ್ದಾರೆ. ಆದರೆ ತಿನ್ನುವ ವಸ್ತುಗಳಿಗೆ ಇಂತಹ ಅತ್ಯಂತ ಹೆಚ್ಚು ವಿಷಕಾರಿ ಸಂಯುಕ್ತವನ್ನು ಅನ್ವಯಿಸುವುದರಿಂದ ವಾಂತಿ, ಹೊಟ್ಟೆ ನೋವು, ಅಂಗಾಂಗ ಹಾನಿ ಮತ್ತು ಸೇವಿಸಿದರೆ ಮಾರಕ ವಿಷ ಸೇರಿದಂತೆ ತೀವ್ರ ಅಪಾಯಗಳು ಎದುರಾಗಬಹುದು ಎಂದು ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರು ಎಚ್ಚರಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗ್ತಿರುವ ವೀಡಿಯೋದಲ್ಲಿ ಮಾರಾಟಗಾರರಲ್ಲಿ ಒಬ್ಬರು ಬಾಳೆಹಣ್ಣುಗಳನ್ನು ಹಿಡಿದು ಕ್ರೀಮ್ ತರಹದ ಈ ವಿಷಕಾರಿ ಉತ್ಪನ್ನವನ್ನು ಅದಕ್ಕೆ ಸ್ಪ್ರೇ ಮಾಡುವುದನ್ನು ಕಾಣಬಹುದು. ಇದು ಬೀದಿ ಆಹಾರದ ನೈರ್ಮಲ್ಯದ ಬಗ್ಗೆ ಈಗಾಗಲೇ ಜಾಗರೂಕರಾಗಿರುವ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.
ಇದೇ ರೀತಿಯ ಅವಾಂತರಗಳನ್ನು ತಡೆಗಟ್ಟಲು ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಮತ್ತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೇರಿದಂತೆ ಆಹಾರ ಸುರಕ್ಷತಾ ಅಧಿಕಾರಿಗಳು ಕಟ್ಟುನಿಟ್ಟಿನ ಪರಿಶೀಲನೆ ಮತ್ತು ಆಗಾಗ್ಗೆ ಭೇಟಿ ನೀಡಿ ತಪಾಸಣೆ ನಡೆಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.