ಗಣಿ ಉಪ ನಿರ್ದೇಶಕರ ಮನೆ ಮೇಲೆ ವಿಜಿಲೆನ್ಸ್ ದಾಳಿ; 4 ಕೋಟಿ ರೂ. ನಗದು ಪತ್ತೆ, ಅಧಿಕಾರಿ ಬಂಧನ

ಕಟಕ್ (ಒಡಿಶಾ): ಕಟಕ್ ವೃತ್ತದ ಗಣಿ ಉಪ ನಿರ್ದೇಶಕರ ನಿವಾಸದಲ್ಲಿ ಒಡಿಶಾ ವಿಜಿಲೆನ್ಸ್ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 4 ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದ್ದು, ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇಲಾಖೆಯ ಇತಿಹಾಸದಲ್ಲೇ ಇದುವರೆಗಿನ ಅತಿ ದೊಡ್ಡ ನಗದು ವಶಪಡಿಸಿಕೊಂಡ ಪ್ರಕರಣ ಇದಾಗಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.
ಗಣಿ ಉಪ ನಿರ್ದೇಶಕ ಶ್ರೀ ದೇಬಬ್ರತ ಮೊಹಂತಿ ಅವರನ್ನು ಪರವಾನಗಿ ಪಡೆದ ಕಲ್ಲಿದ್ದಲು ಮಾರಾಟಗಾರರಿಂದ ₹30,000 ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಂಗಳವಾರ ರಾತ್ರಿ ಬಂಧಿಸಲಾಯಿತು. ಬಂಧನದ ಬಳಿಕ ಅವರ ಭುವನೇಶ್ವರದಲ್ಲಿರುವ ಫ್ಲಾಟ್, ಭದ್ರಕ್ ಜಿಲ್ಲೆಯ ಮಾತಾಸಾಹಿಯಲ್ಲಿರುವ ಪೋಷಕರ ಮನೆ ಹಾಗೂ ಕಟಕ್ನಲ್ಲಿರುವ ಕಚೇರಿ ಕೊಠಡಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು.

ಶೋಧದ ವೇಳೆ ಭುವನೇಶ್ವರದ ಫ್ಲಾಟ್ನಲ್ಲಿ ಟ್ರಾಲಿ ಬ್ಯಾಗ್ಗಳು ಮತ್ತು ಅಲ್ಮರಾಗಳಲ್ಲಿ ಅಡಗಿಸಿಟ್ಟಿದ್ದ ₹4 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಳ್ಳಲಾಗಿದೆ. ನಿಖರ ಮೊತ್ತದ ಎಣಿಕೆ ಪ್ರಗತಿಯಲ್ಲಿದ್ದು, ಸಂಪೂರ್ಣ ವಿವರಗಳನ್ನು ನಂತರ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ. ಲಂಚ ಸ್ವೀಕಾರ ಹಾಗೂ ಅಕ್ರಮ ಆಸ್ತಿ ಸಂಬಂಧಿತ ಆಯಾಮಗಳಲ್ಲಿಯೂ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮೊದಲು, ಧೆಂಕನಲ್ ಜಿಲ್ಲೆಯ ಹಿಂದೋಲ್ ಉಪ ಖಜಾನೆಯ ಮಾಜಿ ಹಿರಿಯ ಕ್ಲರ್ಕ್ ಮನೋರಂಜನ್ ಸಾಹೂ ಅವರನ್ನು ಕುಟುಂಬ ಪಿಂಚಣಿ ಫಲಾನುಭವಿಗಳಿಗೆ ಮೀಸಲಾದ ಸರ್ಕಾರಿ ನಿಧಿಯಲ್ಲಿ 68.85 ಲಕ್ಷ ರೂ. ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಒಡಿಶಾ ವಿಜಿಲೆನ್ಸ್ ಬಂಧಿಸಿತ್ತು.
ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಾಹೂ ಅವರನ್ನು ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.