ಕ್ರಿಕೆಟ್ ಪಂದ್ಯದ ವೇಳೆ ಬಾಲಕರ ನಡುವೆ ಮಾರಾಮಾರಿಗೆ ಓರ್ವ ಬಲಿ; ಮೂವರು ಅಪ್ರಾಪ್ತರ ಬಂಧನ

ಹೊಸದಿಲ್ಲಿ: ಕ್ರಿಕೆಟ್ ಪಂದ್ಯದಲ್ಲಿ ಆರಂಭವಾದ ಅಪ್ರಾಪ್ತ ವಯಸ್ಸಿನ ಮೂವರ ಜಗಳ ಒಬ್ಬ ಸಹ ಆಟಗಾರನ ಕೊಲೆಯಲ್ಲಿ ಕೊನೆಗೊಂಡಿರುವ ಪ್ರಕರಣ ಪಶ್ಚಿಮ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ 15 ವರ್ಷದ ಯುವಕ ಮೃತಪಟ್ಟಿದ್ದು, 12, 13 ಹಾಗೂ 17 ವರ್ಷದ ಮೂವರನ್ನು ಈ ಸಂಬಂಧ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ಸಂಜೆ ಪಶ್ಚಿಮ ದೆಹಲಿಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟ್ ಆಡುವ ವೇಳೆ ಸಂತ್ರಸ್ತ ಬಾಲಕ ಹಾಗೂ ಮತ್ತೊಬ್ಬ 12 ವರ್ಷದ ಬಾಲಕ ವಾಗ್ವಾದ ನಡೆಸಿದ್ದಾರೆ. ಬಳಿಕ ಈ ವಾಕ್ಸಮರ ದೈಹಿಕ ಸಂಘರ್ಷವಾಗಿ ಮಾರ್ಪಟ್ಟಿದೆ. 12 ವರ್ಷದ ಬಾಲಕ ಮನೆಗೆ ಹೋಗಿ 13 ಹಾಗೂ 17 ವರ್ಷದ ತನ್ನ ಸಹೋದರ ಸಂಬಂಧಿಗಳಿಗೆ ಮಾಹಿತಿ ನೀಡಿದ್ದಾನೆ. ಇದನ್ನು ಆಧರಿಸಿ ಸಂತ್ರಸ್ತ ಬಾಲಕನ ಜತೆ ಈ ಮೂವರು ಜಗಳಕ್ಕೆ ಬಂದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಎರಡು ಗುಂಪುಗಳ ನಡುವಿನ ಸಂಘರ್ಷದಲ್ಲಿ ತಳ್ಳಾಟ- ಗುದ್ದಾಟ ನಡದಿದ್ದು, ಸಂತ್ರಸ್ತ ಬಾಲಕನ ತಲೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಗಿ ಪಶ್ಚಿಮ ವಲಯದ ಡಿಸಿಪಿ ದರಾಡೆ ಶರದ್ ಭಾಸ್ಕರ್ ಮಾಹಿತಿ ನೀಡಿದ್ದಾರೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
