ಲೈಂಗಿಕ ದೌರ್ಜನ್ಯ ಆರೋಪ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಲಕ್ಕೋ: ಅಪ್ರಾಪ್ತ ವಯಸ್ಕ ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಇತರ ಅಪರಾಧಗಳಿಗಾಗಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ಅಲಹಾಬಾದ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕಳೆದೊಂದು ವರ್ಷದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಸೋಮವಾರ ಪೊಕ್ಸೆ ಕಾಯ್ದೆಯಡಿ ಪ್ರಯಾಗರಾಜ್ ಝುನ್ಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಯಾಗರಾಜ್ನ ವಿಶೇಷ ಪೊಕ್ಕೊ ನ್ಯಾಯಾಲಯವು ಎಫ್ಐಆರ್ ದಾಖಲಿಸುವಂತೆ ಶನಿವಾರ ಪೊಲೀಸರಿಗೆ ಆದೇಶಿಸಿತ್ತು.

ಬಲ್ಲ ಮೂಲಗಳ ಪ್ರಕಾರ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುವ ಮುನ್ನ ಸರಕಾರಿ ವಕೀಲರ ಕಚೇರಿಗೆ ನೋಟಿಸ್ ರವಾನಿಸಲಾಗಿದೆ.
ಎಫ್ಐಆರ್ ಪ್ರಕಾರ, ಆರೋಪಿಗಳು ಗುರುಕುಲದಲ್ಲಿ ಮತ್ತು ಪ್ರಯಾಗರಾಜ್ನಲ್ಲಿ ಇತ್ತೀಚಿಗೆ ನಡೆದ ಮಾಘ ಮೇಳ ಸೇರಿದಂತೆ ಧಾರ್ಮಿಕ ಸಮಾವೇಶಗಳ ಸಂದರ್ಭಗಳಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರರಾದ ಅಶುತೋಷ ಬ್ರಹ್ಮಚಾರಿ ಮಹಾರಾಜ್ ಮತ್ತು ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಇತರ ಇಬ್ಬರು ಆರೋಪಿಸಿದ್ದಾರೆ.
ದೂರುದಾರರು ಎಫ್ಐಆರ್ನಲ್ಲಿ ಸರಸ್ವತಿ ಮತ್ತು ಮುಕುಂದಾನಂದರ ಜೊತೆ 2-3 ಅಪರಿಚಿತ ವ್ಯಕ್ತಿಗಳನ್ನೂ ಹೆಸರಿಸಿದ್ದಾರೆ. ಆರೋಪಿಗಳು ಧಾರ್ಮಿಕ ಗುರುಗಳ ಸೋಗಿನಲ್ಲಿ ಅಪ್ರಾಪ್ತ ವಯಸ್ಕ ಮತ್ತು ಇನ್ನೋರ್ವ ಯುವಕನ ಮೇಲೆ ಹಲವಾರು ಸಂದರ್ಭಗಳಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮೌನಿ ಅಮವಾಸ್ಯೆಯಂದು ತಾನು ಪವಿತ್ರ ಸ್ನಾನ ಮಾಡುವುದನ್ನು ತಡೆದಿದ್ದಾರೆ ಎಂದು ಆರೋಪಿಸಿ ಮಾಘ ಮೇಳದ ಸಂಘಟಕರೊಂದಿಗೆ ತನ್ನ ಸಂಘರ್ಷದಿಂದಾಗಿ ಸರಸ್ವತಿ ಇತ್ತೀಚಿಗೆ ಸುದ್ದಿಯಾಗಿದ್ದರು.
ಕಾಶಿಯಲ್ಲಿನ ತನ್ನ ವಿದ್ಯಾಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸರಸ್ವತಿ, ತನಗೆ ಕಾನೂನು ನೆರವು ನೀಡುವುದಾಗಿ ಕೆಲವು ವಕೀಲರು ತನ್ನನ್ನು ಸಂಪರ್ಕಿಸಿದ್ದರು. ಆದರೆ ಅವರು ತೆಗೆದುಕೊಂಡಿರಬಹುದಾದ ಯಾವುದೇ ಕ್ರಮದ ಕುರಿತು ತನಗೆ ಮಾಹಿತಿಯಿಲ್ಲ ಎಂದು ತಿಳಿಸಿದರು. ಫೋಟೊವೊಂದನ್ನೂ ತೋರಿಸಿದ ಅವರು ಪ್ರಯಾಗ್ರಾಜ್ನ ಪೊಲೀಸ್ ಅಧಿಕಾರಿಯೋರ್ವರು ತನ್ನ ವಿರುದ್ಧದ ‘ಪಿತೂರಿ’ಯ ಕೇಂದ್ರಬಿಂದುವಾಗಿದ್ದಾರೆ ಎಂದು ಪ್ರತಿಪಾದಿಸಿದರು. ಚಿತ್ರವು ಪೊಲೀಸ್ ಅಧಿಕಾರಿಯು ದೂರುದಾರರಾದ ಅಶುತೋಷ ಬ್ರಹ್ಮಚಾರಿಯ ಜೊತೆ ಕೇಕ್ ಕತ್ತರಿಸುತ್ತಿರುವುದನ್ನು ತೋರಿಸಿದೆ.