ಕೊಚ್ಚಿಯ ‘ಮಂಜುಮ್ಮೆಲ್ ಬಾಯ್ಸ್’: ಮೆಟ್ರೋ ಪಿಲ್ಲರ್ ಮೇಲೆ ಸಿಲುಕಿದ್ದ ಬೆಕ್ಕಿನ ಸಾಹಸಮಯ ರಕ್ಷಣೆ!

ಕೊಚ್ಚಿ: ಮೆಟ್ರೋ ಪಿಲ್ಲರ್ ಮೇಲೆ ಎರಡು ವಾರಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ‘ಸುಭಾಷ್ ಎಂಬ ಬೆಕ್ಕನ್ನು ಕೊನೆಗೂ ಅಗ್ನಿಶಾಮಕ ಮತ್ತು ರಕ್ಷಣಾ ದಳ ಜಂಟಿ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಕೆಳಗಿಳಿಸಿರುವ ಘಟನೆ ರವಿವಾರ ನಡೆದಿದೆ.ಜನಪ್ರಿಯ ಮಲಯಾಳಂ ಚಿತ್ರ ‘Manjummel Boys’ ಅನ್ನು ಉಲ್ಲೇಖಿಸಿ ಪ್ರೀತಿಯಿಂದ ‘ಸುಭಾಷ್’ ಎಂದು ಕರೆಯುತ್ತಿದ್ದ ಈ ಬೆಕ್ಕನ್ನು ಫೆಬ್ರವರಿ 22ರ ರವಿವಾರ ಬೆಳಗಿನ ಜಾವ 1.30ಕ್ಕೆ ಗಾಂಧಿ ನಗರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಆರು ಗಂಟೆಗಳ ನಿರಂತರ ಪ್ರಯತ್ನದ ಬಳಿಕ ರಕ್ಷಿಸಿದರು. ನಂತರ ಬೆಕ್ಕಿಗೆ ತಕ್ಷಣದ ವೈದ್ಯಕೀಯ ಮತ್ತು ಆರೈಕೆಯ ನೆರವು ನೀಡಲಾಯಿತು.ಎರ್ನಾಕುಲಂನ ಜವಾಹರಲಾಲ್ ನೆಹರು ಅಂತರರಾಷ್ಟ್ರೀಯ ಕ್ರೀಡಾಂಗಣದ ಸಮೀಪದ ಮೆಟ್ರೋ ಪಿಲ್ಲರ್ ನಲ್ಲಿ ಸುಮಾರು 15 ದಿನಗಳಿಂದ ಬೆಕ್ಕು ಸಿಲುಕಿಕೊಂಡಿತ್ತು ಎಂದು ತಿಳಿದು ಬಂದಿದೆ. ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭವಾದರೂ, ಬೆಕ್ಕಿನ ನಿಖರ ಸ್ಥಳವನ್ನು ಪತ್ತೆಹಚ್ಚಲು ಅಧಿಕಾರಿಗಳು ಹರಸಾಹಸಪಟ್ಟರು.
ಆಹಾರವಿಲ್ಲದೆ ಹಲವು ದಿನಗಳ ಕಾಲ ಪಿಲ್ಲರ್ ಮೇಲೆಯೇ ಉಳಿದಿದ್ದರಿಂದ ಬೆಕ್ಕಿನ ಆರೋಗ್ಯ ದುರ್ಬಲಗೊಂಡಿತ್ತು. ಇದರ ಪರಿಣಾಮವಾಗಿ ಅದು ಚಲನೆ ಕಡಿಮೆ ಮಾಡಿದ್ದರಿಂದ ಪತ್ತೆ ಕಾರ್ಯಾಚರಣೆ ಹೆಚ್ಚು ಸಮಯ ತೆಗೆದುಕೊಂಡಿತು. ರಕ್ಷಣಾ ತಂಡ ಬಳಸುತ್ತಿದ್ದ ಲಿಫ್ಟ್ ತಾಂತ್ರಿಕ ದೋಷದಿಂದ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ ಕಾರ್ಯಾಚರಣೆ ವಿಳಂಬವಾಯಿತು. ಬಳಿಕ ಮತ್ತೊಂದು ಲಿಫ್ಟ್ ತರಿಸಿ ಕಾರ್ಯಾಚರಣೆ ಮುಂದುವರಿಸಲಾಯಿತು.ಸಂಜೆ 4.44ಕ್ಕೆ ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ (KMRCL) ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ, ರಕ್ಷಣೆಗೆ ಅನುಕೂಲವಾಗುವಂತೆ 17 ನಿಮಿಷಗಳ ಕಾಲ ಮೆಟ್ರೋ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಸಂಜೆ 5.15ಕ್ಕೆ ದಿನದ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಬಳಿಕ ರಾತ್ರಿ 11.30ಕ್ಕೆ ಮೆಟ್ರೋ ಸೇವೆಗಳು ಪುನರಾರಂಭಗೊಂಡವು.
ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಲು ಸ್ಥಳದ ಬಳಿ ಜನಸಮೂಹ ಜಮಾಯಿಸಿತ್ತು. ಕೊನೆಗೂ ಬೆಕ್ಕನ್ನು ಕೆಳಗಿಳಿಸಿದಾಗ ಜನರು ಅಧಿಕಾರಿಗಳನ್ನು ಹುರಿದುಂಬಿಸಿ ಚಪ್ಪಾಳೆ ತಟ್ಟಿದರು. ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಣಾ ದೃಶ್ಯಗಳು ವೈರಲ್ ಆಗಿವೆ.
