ವೇತನ ಕೇಳಿದ ಬಂಗಾಳಿ ಕಾರ್ಮಿಕರ ಮೇಲೆ ಬಜರಂಗದಳದಿಂದ ಹಲ್ಲೆ!

ರಾಯಪುರ: ಪಶ್ಚಿಮ ಬಂಗಾಳದ ಎಂಟು ಮಂದಿ ವಲಸೆ ಕಾರ್ಮಿಕರ ಮೇಲೆ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಛತ್ತೀಸ್ಗಡದ ರಾಯಪುರದಲ್ಲಿ ರವಿವಾರ ನಡೆದಿದೆ. ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.


ರಾಯಪುರ ಜಿಲ್ಲೆಯ ಕಟೊವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಜ್ಪುರದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಚೆಪ್ರಿ ಗ್ರಾಮದವರಾಗಿದ್ದು, ಅವರು ಸೂರಜ್ಪುರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ರವಿವಾರ ಈ ಕಾರ್ಮಿಕರು ತಮ್ಮ ವೇತನದ ಕುರಿತಾಗಿ ಬೇಕರಿಯ ನಿರ್ವಾಹಕರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಆ ವೇಳೆ ಸ್ಥಳಕ್ಕೆ ಆಗಮಿಸಿದ ಬಜರಂಗ ದಳ ಕಾರ್ಯಕರ್ತರು ಈ ಕಾರ್ಮಿಕರ ಮೇಲೆ ಲಾಠಿಗಳಿಂದ ಥಳಿಸಿದ್ದಾರೆ.
ಈ ದಾಳಿಯಲ್ಲಿ ಓರ್ವ ವಲಸೆ ಕಾರ್ಮಿಕನ ಬಲಗೈ ಮೂಳೆ ಮುರಿದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಮಿಕರನ್ನು ಬಜರಂಗ ದಳ ಕಾರ್ಯಕರ್ತರ ದಾಳಿಯಿಂದ ರಕ್ಷಿಸಿದ್ದಾರೆ.