ಗುರುಗ್ರಾಮ ಎನ್ಕೌಂಟರ್: ಮೂರು ರಾಜ್ಯಗಳಿಗೆ ಬೇಕಾಗಿದ್ದ ‘ಒಂದು ಲಕ್ಷದ ಸರದಾರ’ ಸೆರೆ; ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕ್ರಿಮಿನಲ್!

ಗುರುಗ್ರಾಮ: ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಕೊಲೆ ಯತ್ನ, ದರೋಡೆ ಸೇರಿದಂತೆ ಸುಮಾರು 24ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ರಾಜ್ಯ ಅಪರಾಧಿ ಯಾದ್ ರಾಮ್ (50) ಎಂಬಾತನನ್ನು ಗುರುಗ್ರಾಮ ಮತ್ತು ನುಹ್ ಪೊಲೀಸರ ಜಂಟಿ ತಂಡ ಎನ್ಕೌಂಟರ್ ನಡೆಸಿ ಬಂಧಿಸಿದೆ. ಈತನನ್ನು ಹಿಡಿದುಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.


ಭಾನುವಾರ ರಾತ್ರಿ ಸೋಹ್ನಾ-ಗುರುಗ್ರಾಮ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಸಂಚರಿಸುತ್ತಿದ್ದ ಆತನನ್ನು ಪೊಲೀಸರು ತಡೆಯಲು ಯತ್ನಿಸಿದಾಗ, ಆತ ಪೊಲೀಸರ ಮೇಲೆಯೇ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಯಾದ್ ರಾಮ್ನ ಎರಡೂ ಕಾಲುಗಳಿಗೆ ಗುಂಡು ತಗುಲಿದ್ದು, ಆತ ಕೆಳಗೆ ಬೀಳುತ್ತಿದ್ದಂತೆಯೇ ಪೊಲೀಸರು ಆತನನ್ನು ಸುತ್ತುವರಿದು ಬಂಧಿಸಿದ್ದಾರೆ.

ಬಂಧಿತನಿಂದ ಒಂದು ಬೈಕ್, ಎರಡು ಅಕ್ರಮ ಪಿಸ್ತೂಲ್ಗಳು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಮೂಲದವನಾಗಿದ್ದರೂ ಜೈಪುರದಲ್ಲಿ ತಲೆಮರೆಸಿಕೊಂಡಿದ್ದ ಈ ಕುಖ್ಯಾತ ಅಪರಾಧಿಯ ಬಂಧನದಿಂದಾಗಿ ಹಲವು ವರ್ಷಗಳ ಕಾಲ ಮುಚ್ಚಿಹೋಗಿದ್ದ ಅಪರಾಧ ಪ್ರಕರಣಗಳ ತನಿಖೆಗೆ ಈಗ ವೇಗ ಸಿಕ್ಕಂತಾಗಿದೆ.
