₹1,500 ಹಣಕ್ಕಾಗಿ ಕೊಲೆ: ಬುಡಾ ಕಾಂಪ್ಲೆಕ್ಸ್ನಲ್ಲಿ ಗುಜರಿ ಕಾರ್ಮಿಕನಿಗೆ ದುರಂತ ಅಂತ್ಯ

ಬಳ್ಳಾರಿ: ಬುಡಾ ಕಾಂಪ್ಲೆಕ್ಸ್ (BUDA Complex) ಬಳಿ ನ.11 ರಂದು ನಡೆದಿದ್ದ ಕೊಲೆ ಕೇಸ್ಗೆ (Murder Case) ಟ್ವಿಸ್ಟ್ ಸಿಕ್ಕಿದ್ದು 1,500 ರೂ. ಗೆ ಕೊಲೆ ನಡೆದಿದೆ ಎನ್ನುವ ವಿಷಯ ಗೊತ್ತಾಗಿದೆ.

ಬಳ್ಳಾರಿಯ ಹಂದ್ರಾಳು ಗ್ರಾಮದ ಗುಜರಿ ಕಾರ್ಮಿಕ ಶಿವು (21) ಕೊಲೆಯಾಗಿದ್ದ ದುರ್ದೈವಿ. ರಾಂಪುರ ಗ್ರಾಮದ ಅತೀಶ್ ಅಲಿಯಾಸ್ ಸತೀಶ್ (20) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಶಿವು ಹಾಗೂ ಸತೀಶ್ ಇಬ್ಬರೂ ಗುಜರಿ ಸಾಮಾನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಇಬ್ಬರು ಸೇರಿ ಒಂದು ದಿನದಲ್ಲಿ 2 ಸಾವಿರ ರೂ. ಹಣ ದುಡಿದಿದ್ದರು. 500 ರೂ. ಹಣದಲ್ಲಿ ಬುಡಾ ಕಾಂಪ್ಲೆಕ್ಸ್ನ ಮೇಲ್ಭಾಗದಲ್ಲಿ ಕುಳಿತು ಇಬ್ಬರೂ ಮದ್ಯಪಾನ ಮಾಡಿದ್ದರು. ಆ ಬಳಿಕ ಉಳಿದ 1500 ರೂ. ಹಣದಲ್ಲಿ ಆರೋಪಿ ಅತೀಶ್ ಪಾಲು ಕೇಳಿದ್ದ.
ಕುಡಿದ ಮತ್ತಿನಲ್ಲಿ ಹಣ ನೀಡುವುದುಲ್ಲ ಎಂದು ಕೊಲೆಯಾದ ಶಿವು ತಗಾದೆ ತೆಗಿದಿದ್ದ ಎನ್ನಲಾಗಿದೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಶಿವು ತಲೆ ಹಾಗೂ ಮುಖದ ಭಾಗದಲ್ಲಿ ಮದ್ಯದ ಬಾಟಲಿಯಿಂದ ಹಲ್ಲೆ ಮಾಡಿದ್ದ. ಬಳಿಕ ನಾಲ್ಕು ಅಂತಸ್ತಿನಿಂದ ಶಿವುನನ್ನು ತಳ್ಳಿ ಕೊಲೆ ಮಾಡಿದ್ದ

ಯಾರಿಗೂ ಅನುಮಾನ ಬಾರದಂತೆ ಪಿಲ್ಲರ್ ಕೆಳಗೆ ಶವ ಎಸೆದು ಪರಾರಿಯಾಗಿ ಬಳ್ಳಾರಿ ರೈಲು ನಿಲ್ದಾಣದಲ್ಲಿ ಮಲಗಿದ್ದ. ಇಬ್ಬರೂ ಜೊತೆಯಾಗಿ ಬಂದಿದ್ದ ಸಿಸಿ ಕ್ಯಾಮಾರಾ ದೃಶ್ಯಗಳ ಸುಳಿವಿನ ಮೇಲೆ ಎಪಿಎಂಸಿ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.