ಮರು ಮದುವೆಯ ನೆಪದಲ್ಲಿ ಮಹಾಮೋಸ: ವಿವಾಹಿತ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಲಕ್ಷಾಂತರ ರೂ. ಹಣ ಪಡೆದು ವಂಚನೆ; 3 ಸಂತ್ರಸ್ತೆಯರಿಂದ ದೂರು!

ಚಿಕ್ಕಬಳ್ಳಾಪುರ: ವಿವಾಹಿತ ಒಂಟಿ ಮಹಿಳೆಯರನ್ನೇ (Women) ಮರು ಮದುವೆ ಮಾಡಿಕೊಳ್ಳುವ ನೆಪದಲ್ಲಿ ಜಿಲ್ಲೆಯ ಚಿಂತಾಮಣಿ ನಗರದ ಯುವಕನೊರ್ವ, ಪ್ರೀತಿ ಪ್ರೇಮ ಕಾಮ ಅಂತೇಲ್ಲಾ ನಂಬಿಸಿ, ಬಳಿಕ ಅವರಿಂದ ಲಕ್ಷ ಲಕ್ಷ ಹಣ ಪಡೆದು ಮಹಾಮೋಸ (Fraud) ಮಾಡಿರುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಯುವಕನಿಂದ ನೊಂದ ಮೂರು ಜನ ಮಹಿಳೆಯರು ಈಗ ಆಚೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂತ್ರಸ್ಥೆ ಮಹಿಳೆಯರು ಒಂದಲ್ಲಾ ಒಂದು ರೀತಿಯಲ್ಲಿ ಮನೆಯಲ್ಲಿ, ಕುಟುಂಬದಲ್ಲಿ, ಸಂಸಾರದಲ್ಲಿ ನೊಂದು-ಬೆಂದವರು. ತಮ್ಮ ಪಾಡಿಗೆ ತಾವು ಇದ್ದಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಆದರೆ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್ ಎನ್ನುವ ಮಾಯಾಜಾಲದಲ್ಲಿ ವಿಹರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಫೇಸ್ಬುಕ್ನಲ್ಲಿ ಬಂದ ರಿಕ್ವೆಸ್ಟ್ ಎಕ್ಸ್ಪೆಟ್ ಮಾಡಿ ಇವರೆಲ್ಲಾ ಮೋಸದ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸಿ.ಎಂ.ಗಿರಿ ಅಲಿಯಾಸ್ ಸಾಯಿಸುದೀಪ್ ಎನ್ನುವ ನಯವಂಚಕ ಇವರೆಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ವಂಚಿಸಿ ಹಣ ಪಡೆದು, ಕಿರುಕುಳ ನೀಡಿದ್ದನಂತೆ. ಇದರಿಂದ ಬೇಸತ್ತು ಈಗ ನ್ಯಾಯಕ್ಕಾಗಿ ಸಂತ್ರಸ್ಥರಲ್ಲಿ 3 ಜನ ಮಹಿಳೆಯರು ಚಿಂತಾಮಣಿ ನಗರಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.

ವಿವಾಹಿತ ಮಹಿಳೆಯರೇ ಟಾರ್ಗೆಟ್
ಅಸಲಿಗೆ ಚಿಂತಾಮಣಿಯ ಸಿ.ಎಂ.ಗಿರೀಶ್ ಅಲಿಯಾಸ್ ಸಾಯಿಸುದೀಪ್ ಎನ್ನುವ ನಯವಂಚಕ ಒಬ್ಬೊಂಟಿ ವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಚಿನ್ನ, ರನ್ನ, ಬಂಗಾರ, ನೀನೇ ನನ್ನ ಜೀವನದ ಸಿಂಗಾರಿ ಎಂದು ನಂಬಿಸಿ ಮರುಮದುವೆ ಮಾಡಿಕೊಳ್ಳುವ ನೆಪದಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ಜೊತೆಗೆ ವಿಡಿಯೋ, ಆಡಿಯೋಗಳನ್ನು ಇಟ್ಟುಕೊಂಡಿದ್ದಾನೆ.
ನಂದಗುಡಿ, ಬೆಂಗಳೂರು, ಚಿಕ್ಕಬಳ್ಳಾಪುರ, ಬಂಗಾರಪೇಟೆ ಸೇರಿದಂತೆ 5ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ ಅವರಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಇದರಿಂದ ನೊಂದಿರುವ ಸಂತ್ರಸ್ಥೆಯರು ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಅವರ ಮೂಲಕ ಚಿಂತಾಮಣಿ ನಗರಠಾಣೆಗೆ ದೂರು ನೀಡಿದ್ದಾರೆ.
ಮೊದಲೇ ನೊಂದು-ಬೆಂದು ದುಃಖದಲ್ಲಿದ್ದ ವಿವಾಹಿತ ಮಹಿಳೆಯರ ಜೊತೆ ಚೆಲ್ಲಾಟವಾಡಿರುವ ನಯವಂಚಕ ಯುವಕನಿಗೆ ಪೋಲಿಸರು ಬುದ್ಧಿ ಕಲಿಸಬೇಕಿದೆ. ಮತ್ತೊಂದಡೆ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುವ ಮಹಿಳೆಯರು ಈಗಲಾದರೂ ಜಾಣರಾಗಿ, ಜಾಗೃತರಾಗಬೇಕಿದೆ.