ಸಾಂಪ್ರದಾಯಿಕ ಯುದ್ಧದಲ್ಲೂ ಪಾಕಿಸ್ತಾನ ಸೋಲುತ್ತೆ: ಭಾರತೀಯರನ್ನು ನಿರಂತರ ಪ್ರಚೋದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದ ಜಾನ್ ಕಿರಿಯಾಕೌ

ಇಸ್ಲಾಮಾಬಾದ್: ಭಾರತದ ವಿರುದ್ಧ ಯುದ್ಧ ಮಾಡುವುದರಿಂದ ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಪಾಕ್ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದ ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಿಂದ ಏನೂ ಒಳ್ಳೆಯದಾಗುವುದಿಲ್ಲ. ಏಕೆಂದರೆ ಪಾಕಿಸ್ತಾನಿಗಳು ಸೋಲುತ್ತಾರೆ. ನಾನು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಾಂಪ್ರದಾಯಿಕ ಯುದ್ಧದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ನಿರಂತರವಾಗಿ ಭಾರತೀಯರನ್ನು ಪ್ರಚೋದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾತನಾಡಿದ್ದಾರೆ
016 ರಲ್ಲಿ ಸರ್ಜಿಕಲ್ ಸ್ಟ್ರೈಕ್, 2019 ರಲ್ಲಿ ಬಾಲಾಕೋಟ್ ದಾಳಿ ಮತ್ತು ಈ ವರ್ಷದ ಏಪ್ರಿಲ್ನಲ್ಲಿ 26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಹಲವು ವರ್ಷಗಳಿಂದ ಗಡಿಯಾಚೆಯಿಂದ ಭಯೋತ್ಪಾದಕರು ನಡೆಸಿದ ದಾಳಿಗಳಿಗೆ ಭಾರತ ನಿರ್ಣಾಯಕವಾಗಿ ಪ್ರತ್ಯುತ್ತರ ನೀಡಿದೆ.
2001 ರ ಸಂಸತ್ತಿನ ದಾಳಿಯ ನಂತರ, ಆಪರೇಷನ್ ಪರಾಕ್ರಮ್ ಕಾರ್ಯಾಚರಣೆ ನಡೆಯಿತು. ಭಾರತ-ಪಾಕಿಸ್ತಾನದ ಉದ್ವಿಗ್ನತೆಗಳು ಯುದ್ಧಕ್ಕೆ ಕಾರಣವಾಗಬಹುದೆಂದು ಅಮೆರಿಕವು ನಿರೀಕ್ಷಿಸಿತ್ತು. ಆಗ ಪಾಕಿಸ್ತಾನ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಿತ್ತು ಎಂದು ಕಿರಿಯಾಕೌ ನೆನಪಿಸಿಕೊಂಡಿದ್ದಾರೆ.
ಪಾಕಿಸ್ತಾನದ ಪರಮಾಣು ಬಾಂಬ್ ವಿನ್ಯಾಸಗೊಳಿಸಿದ ಅಬ್ದುಲ್ ಖದೀರ್ ಖಾನ್ ಅವರನ್ನು ಅಮೆರಿಕ ನಿರ್ಮೂಲನೆ ಮಾಡಬಹುದಿತ್ತು. ಆದರೆ ಸೌದಿ ಅರೇಬಿಯಾದ ಕೋರಿಕೆಯ ಮೇರೆಗೆ ಅವರನ್ನು ಉಳಿಸಿತು ಎಂದು ಕಿರಿಯಾಕೌ ತಿಳಿಸಿದ್ದಾರೆ.
ನಾವು ಇಸ್ರೇಲಿ ವಿಧಾನವನ್ನು ಅಳವಡಿಸಿಕೊಂಡಿದ್ದರೆ, ಅವನನ್ನು ಕೊಲ್ಲುತ್ತಿದ್ದೆವು. ಅವನು ಎಲ್ಲಿ ವಾಸಿಸುತ್ತಿದ್ದಾನೆಂಬ ಬಗ್ಗೆ ನಮಗೆ ತಿಳಿದಿತ್ತು. ಆದರೆ, ಅವನಿಗೆ ಸೌದಿ ಸರ್ಕಾರದ ಬೆಂಬಲವಿತ್ತು. ಸೌದಿಗಳು ನಮ್ಮ ಬಳಿಗೆ ಬಂದು, ‘ದಯವಿಟ್ಟು ಅವನನ್ನು ಬಿಟ್ಟುಬಿಡಿ. ನಮಗೆ ಎಕ್ಯೂ ಖಾನ್ ಇಷ್ಟ. ನಾವು ಎಕ್ಯೂ ಖಾನ್ ಜೊತೆ ಕೆಲಸ ಮಾಡುತ್ತಿದ್ದೇವೆ. ಅವನನ್ನು ಬಿಟ್ಟುಬಿಡಿ’ ಎಂದು ಕೇಳಿಕೊಂಡಿತ್ತೆಂದು ತಿಳಿಸಿದ್ದಾರೆ.