Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದರ್ಶನ್ ಜೈಲು ಸೌಲಭ್ಯ ವಿವಾದಕ್ಕೆ ಟ್ವಿಸ್ಟ್: ನಟನ ಹಲವು ಆರೋಪಗಳು ಸುಳ್ಳು ಎಂದ ಕಾನೂನು ಸೇವಾ ಪ್ರಾಧಿಕಾರದ ವರದಿ; ನ್ಯಾಯಾಲಯಕ್ಕೆ ಸಲ್ಲಿಕೆ

Spread the love

ರೇಣುಕಾ ಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ (Darshan) ಜೈಲು ಸೇರಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ನಟ ದರ್ಶನ್ ಜೈಲು ಸೇರಿದಾಗಿನಿಂದಲೂ ಜೈಲಧಿಕಾರಿಗಳ ಬಗ್ಗೆ, ಜೈಲಿನಲ್ಲಿರುವ ವ್ಯವಸ್ಥೆಗಳ ಬಗ್ಗೆ ಒಂದಲ್ಲ ಒಂದು ದೂರುಗಳನ್ನು ಹೇಳುತ್ತಲೇ ಬಂದಿದ್ದಾರೆ. ಜೈಲಿನಲ್ಲಿ ತಮಗೆ ಕೆಲ ಪ್ರಮುಖ ಸೌಲಭ್ಯಗಳನ್ನು ನೀಡಲಾಗಿತ್ತಿಲ್ಲ ಎಂದು ದರ್ಶನ್ ಆರೋಪಿಸಿದ್ದು, ಒಮ್ಮೆಯಂತೂ ನ್ಯಾಯಾಧೀಶರ ಬಳಿ ವಿಷಕ್ಕಾಗಿ ಬೇಡಿಕೆ ಸಹ ಇಟ್ಟಿದ್ದರು. ದರ್ಶನ್, ಜೈಲಿನಲ್ಲಿ ಸೌಲಭ್ಯಗಳ ನಿರಾಕರಣೆ ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರಿ, ಸ್ವತಃ ನ್ಯಾಯಾಧೀಶರೆ ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಕೋರಿದ್ದರು. ಇದೀಗ ಕಾನೂನು ಸೇವೆಗಳ ಪ್ರಾಧಿಕಾರವು ಜೈಲಿಗೆ ಭೇಟಿ ನೀಡಿ ದರ್ಶನ್ ಸ್ಥಿತಿಯನ್ನು ಪರಿಶೀಲನೆ ನಡೆಸಿದ್ದು, 57 ನೇ ಸಿಸಿಹೆಚ್ ಕೋರ್ಟ್​​ಗೆ ವರದಿ ಸಲ್ಲಿಸಿದೆ.

ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ವರದಿ ಗಮನಿಸಿದರೆ ದರ್ಶನ್ ಇಷ್ಟು ದಿನ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರೆ ಎಂಬ ಅನುಮಾನ ಮೂಡುತ್ತಿದೆ ಮಾತ್ರವಲ್ಲದೆ ದರ್ಶನ್, ಬೇರೆ ವಿಚಾರಣಾಧೀನ ಕೈದಿಗಳಿಗೆ ಇಲ್ಲದ ಸವಲತ್ತುಗಳಿಗೆ ಬೇಡಿಕೆ ಇಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಜೈಲಿಗೆ ಭೇಟಿ ನೀಡಿದ್ದ ಕಾನೂನು ಸೇವೆ ಪ್ರಾಧಿಕಾರಿ, ನಟ ದರ್ಶನ್​​ರ ಆರೋಗ್ಯ, ಅವರ ಜೈಲು ಬ್ಯಾರಕ್, ಅವರ ನಿತ್ಯದ ಕೆಲಸಗಳು ಎಲ್ಲವನ್ನೂ ವೀಕ್ಷಿಸಿ, ಸ್ವತಃ ನಟ ದರ್ಶನ್​​ ಜೊತೆಗೆ ಚರ್ಚೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಪ್ರಾಧಿಕಾರ ಸಲ್ಲಿಸಿರುವ ವರದಿಯ ಪ್ರಕಾರ ನಟ ದರ್ಶನ್ ಅನ್ನು ಇರಿಸಲಾಗಿರುವ ಸೆಲ್​​ನಲ್ಲಿ ಒಂದು ಭಾರತೀಯ ಶೈಲಿಯ ಮತ್ತು ಇನ್ನೊಂದು ವಿದೇಶಿ ಶೈಲಿಯ ಟಾಯ್ಲೆಟ್ ವ್ಯವಸ್ಥೆ ಇದೆ. ದರ್ಶನ್​​ಗೆ ಹಾಸಿಗೆ ದಿಂಬು ನೀಡಲಾಗಿಲ್ಲ ಎಂಬ ವಿಚಾರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ವಿಚಾರಣಾಧೀನ ಕೈದಿಗಳಿಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡುವ ನಿಯಮವಿಲ್ಲ ಎಂದು ತಿಳಿಸಲಾಗಿದೆ. ದರ್ಶನ್ ಅವರು ಬಿಸಿಲನ್ನೇ ನೋಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಪ್ರತಿದಿನ ಒಂದು ಗಂಟೆ ವಾಕಿಂಗ್ ಮತ್ತು ಆಟ ಆಡಲು ಅವಕಾಶ ನೀಡಲಾಗಿದೆ. ಆದರೆ ದರ್ಶನ್ ಹೆಚ್ಚು ಓಡಾಡಿದರೆ ಸೆಲೆಬ್ರಿಟಿ ಆಗಿರುವುದರಿಂದ ಇತರೆ ಬ್ಯಾರಕ್​​ನ ಕೈದಿಗಳು ಕಿರುಚುವುದು ಮಾಡುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಟಿವಿ ನೀಡಿಲ್ಲ ಎಂದು ಸಹ ನಟ ದರ್ಶನ್ ದೂರಿದ್ದರು. ಅಸಲಿಗೆ ಕೈದಿಗಳಿಗೆ ಟಿವಿ ನೋಡಲು ಅವಕಾಶ ಇದೆ. ಆದರೆ ದರ್ಶನ್ ಹೇಳಿರುವಂತೆ ಅವರಿಗಾಗಿ ಪ್ರತ್ಯೇಕ ಟಿವಿ ನೀಡುವ ವ್ಯವಸ್ಥೆ ಇಲ್ಲ. ಇನ್ನು ಕುಟುಂಬಕ್ಕೆ ಜೈಲಿನಿಂದ ಕರೆ ಮಾಡಿದಾಗ ಲೌಡ್​​ಸ್ಪೀಕರ್​​​ನಲ್ಲಿ ಮಾತನಾಡುವಂತೆ ಹೇಳುತ್ತಾರೆ ಎಂಬುದರ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಅಸಲಿಗೆ ಜೈಲಿನ ನಿಯಮದ ಪ್ರಕಾರ ಜೈಲಿನಿಂದ ಕೈದಿಗಳು ಕರೆ ಮಾಡಿದಾಗ ಅವರ ಕರೆಗಳನ್ನು ಅಧಿಕಾರಿಗಳು ಆಲಿಸಬಹುದಾಗಿದೆ. ಹಾಗಾಗಿಯೇ ಲೌಡ್​​ಸ್ಪೀಕರ್​​ನಲ್ಲಿ ಮಾತನಾಡುವಂತೆ ದರ್ಶನ್ ಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಬಿಸಿಲಿಗೆ ಹೋಗದೆ ಕಾಲಿಗೆ ಫಂಗಸ್ ಬಂದಿದೆ ಎಂಬ ಆರೋಪವೂ ಸುಳ್ಳಾಗಿದ್ದು, ಚರ್ಮ ರೋಗ ತಜ್ಞೆ ಜ್ಯೋತಿ ಅವರು ದರ್ಶನ್ ಅವರನ್ನು ಪರಿಶೀಲನೆ ಮಾಡಿದ್ದು, ದರ್ಶನ್ ಅವರ ಕಾಲಿಗೆ ಫಂಗಸ್ ಬಂದಿಲ್ಲ ಬದಲಿಗೆ ಅವರ ಹಿಮ್ಮಡಿ ತುಸು ಒಡೆದಿದೆ. ಅದಕ್ಕೆ ಔಷಧ ಸೂಚಿಸಲಾಗಿದೆ. ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಕೆ ನೀಡಿಲ್ಲ ಎಂದು ಸಹ ದರ್ಶನ್ ಆರೋಪಿಸಿದ್ದರು. ಅಸಲಿಗೆ ಅಪರಾಧಿಗಳಿಗೆ ಮಾತ್ರವೇ ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿಚಾರಣಾಧೀನ ಕೈದಿಗಳಿಗೆ ಇವುಗಳನ್ನು ಕೊಡಬೇಕು ಎಂಬ ನಿಯಮ ಇಲ್ಲ.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ವರದರಾಜ್ ಅವರು ಈ ವರದಿ ಸಲ್ಲಿಸಿದ್ದು, ಅವರು ಹೇಳಿರುವಂತೆ ಜೈಲು ಅಧಿಕಾರಿಗಳು ಜೈಲಿನ ಕೈಪಿಡಿಯಲ್ಲಿರುವ ಎಲ್ಲ ನಿಯಮಗಳನ್ನು ಪಾಲನೆ ಮಾಡಿದ್ದಾರೆ. ಆದರೆ ಅವರಿಗೆ ಬಿಸಿಲಿನಲ್ಲಿ ವಾಕಿಂಗ್ ಮಾಡಲು ಪರ್ಯಾಯ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕಿದೆ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *